ಶಿವಮೊಗ್ಗ: 7.26 ಲಕ್ಷ ರೂ.ಗೆ ಮೂರು ಪ್ರಾಣಿಗಳನ್ನು ದತ್ತು ಪಡೆದ ಸವ್ಯಸಾಚಿ ಕುಟುಂಬ
ಶಿವಮೊಗ್ಗ, ಜುಲೈ 26: ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಬರೋಬ್ಬರಿ 7.26 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಹುಲಿ ಮತ್ತು ಸಿಂಹವನ್ನು ದತ್ತು ಪಡೆದುಕೊಂಡು ಸವ್ಯಸಾಚಿ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇದೇ ಮೊದಲು ದೊಡ್ಡ ಮೊತ್ತಕ್ಕೆ ಸುಜಾತ ರಾಮಸ್ವಾಮಿ ಮತ್ತು ಸವ್ಯಸಾಚಿ ಎಂಬುವವರ ಕುಟುಂಬಸ್ಥರು 7.26 ಲಕ್ಷ ರೂ. ಗಳಿಗೆ ಎರಡು ಹುಲಿ ಮತ್ತು ಒಂದು ಸಿಂಹವನ್ನು ದತ್ತು ಪಡೆದುಕೊಂಡಿದೆ.
ಭೂಮಿ ನೀಡುವ ಯಾವ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ: ಬಿ.ವೈ.ರಾಘವೇಂದ್ರ
ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಇನ್ನಿತರ ಸಮಸ್ಯೆಗಳಿಂದ ಇತ್ತೀಚಿನ ದಿನಗಳಲ್ಲಿ ಲಯನ್ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಲಯನ್ ಸಫಾರಿಯ ಆದಾಯಕ್ಕೂ ಹೊಡೆತಬಿದ್ದಿದೆ.
ಈ ರೀತಿಯ ಪರಿಸ್ಥಿತಿಯಲ್ಲಿ ಸವ್ಯಸಾಚಿ ಅವರು ಲಯನ್ ಸಫಾರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಪ್ರಾಣಿಗಳನ್ನು ದತ್ತು ಪಡೆಯುವ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸಂತೋಷದಿಂದ ದತ್ತು ನೀಡಲು ಮುಂದಾಗಿದ್ದಾರೆ.
ಶಿವಮೊಗ್ಗದಲ್ಲಿ ವಿಧಿಸಿದ್ದ ಕ್ಲಸ್ಟರ್ ಕಂಟೈನ್ಮೆಂಟ್ ಆದೇಶ ವಾಪಸ್
ಸವ್ಯಸಾಚಿ ತಮ್ಮ ತಾಯಿಯ ಜೊತೆಗೆ ಆಗಮಿಸಿ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ಲಯನ್ ಸಫಾರಿಯ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ತಿಳಿಸಿದ್ದಾರೆ.
ಈ ಹಿಂದೆ ಕ್ರಿಕೆಟ್ ಕ್ರೀಡಾಪಟು ಅನಿಲ್ ಕುಂಬ್ಳೆ ಶಿವಮೊಗ್ಗ ಲಯನ್ ಸಫಾರಿಯ ಪ್ರಾಣಿಯನ್ನು ದತ್ತು ಪಡೆದಿದ್ದರು. ಇದರ ನಂತರ ದೊಡ್ಡ ಮೊತ್ತಕ್ಕೆ ಪ್ರಾಣಿಯನ್ನು ಯಾರೂ ದತ್ತು ಪಡೆದುಕೊಂಡಿರಲಿಲ್ಲ. ಇದೀಗ ಸವ್ಯಸಾಚಿ ಕುಟುಂಬ ಸಂಕಷ್ಟ ಕಾಲದಲ್ಲಿ ಪ್ರಾಣಿ ದತ್ತು ಪಡೆದುಕೊಂಡಿರುವುದು ಸಮಾಜಕ್ಕೆ ಮಾದರಿಯ ಕೆಲಸವಾಗಿದ್ದು, ಅವರ ಪ್ರಾಣಿ ಪ್ರೇಮಕ್ಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.