ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶಿವಮೊಗ್ಗದಲ್ಲಿ 6 ರಾಜ್ಯಗಳ ಸಮಾವೇಶ
ಬೆಂಗಳೂರು, ನವೆಂಬರ್ 13: ಪಶ್ಚಿಮಘಟ್ಟಗಳ ಉಳಿವಿಗಾಗಿ ಆರು ರಾಜ್ಯಗಳ ಹೋರಾಟಗಾರರು ಶಿವಮೊಗ್ಗದಲ್ಲಿ ನವೆಂಬರ್ 18ರಂದು ಮಾಧವ ಗಾಡ್ಗೀಳ್ ವರದಿ ಜಾರಿಗೆ ತನ್ನಿ-ಪಶ್ಚಿಮಘಟ್ಟ ಉಳಿಸಿ ಅಭಿಯಾನವನ್ನು ಹಮ್ಮಿಕೊಂಡಿವೆ.
ಕರ್ನಾಟಕ, ಕೇರಳ, ಪುದುಚೇರಿ, ಗೋವಾ, ಮಹಾರಾಷ್ಟ್ರ, ಗುಜರಾತ್ ನ ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿರುವ ಹೋರಾಟಗಾರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಭಿಯಾನಕ್ಕೆ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಚಾಲನೆ ನೀಡಲಿದ್ದಾರೆ. ಪಶ್ಚಿಮ ಘಟ್ಟಗಳ ಉಳಿಸಿ ಕೇವಲ ಘೋಷವಾಖ್ಯವಾಗಿದೆ. ಹಾಗಾಗಿ ತಾರ್ಕಿಕ ರೂಪ ಕೊಡುವುದಕ್ಕಾಗಿ ಅಭಿಯಾನ ಆಯೋಜಿಸಲಾಗಿದೆ.
ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ಕರ್ನಾಟಕ ಸರ್ಕಾರ
ಅಂದಿನ ಸಮಾವೇಶದ ನಿರ್ಣಯಗಳನ್ನು ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ತಲುಪಿಸಲಾಗುತ್ತದೆ. ಪಶ್ಚಿಮಘಟ್ಟಗಳ ಪ್ರಸ್ತುತ ಸ್ಥಿತಿ-ಗತಿ ಕುರಿತು ಪಶ್ಚಿಮಘಟ್ಟ ಪರಿಸರ ತಜ್ಞರ ಸಮಿತಿ ಅಧ್ಯಕ್ಷ ಡಾ. ಮಾಧವ ಗಾಡ್ಗೀಳ್ , ನದಿಗಳ ಸಂರಕ್ಷಣೆಯಲ್ಲಿ ಸ್ವಾಭಿಮಾನ ಅರಣ್ಯಗಳ ಮಹತ್ವ ಕುರಿತು ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಮಾತನಾಡಲಿದ್ದಾರೆ.
ಕಸ್ತೂರಿ ರಂಗನ್ ವರದಿಯಲ್ಲೇನಿದೆ
ಪಶ್ಚಿಮ ಘಟ್ಟ ವ್ಯಾಪ್ತಿಯ ಶೇ.63 ಭಾಗದಲ್ಲಿ ಈಗಾಗಲೇ ಜನ ವಸತಿ ಹೆಚ್ಚಾಗಿದ್ದು, ನೈಸರ್ಗಿಕ ಪರಿಸರ ಹಾಳಾಗಿರುವುದರಿಂದ ಇಲ್ಲಿ ಯಾವುದೇ ಸಂರಕ್ಷಣಾ ಕಾರ್ಯದ ಅಗತ್ಯವಿಲ್ಲ. ಉಳಿದ ಶೇ 37 ಭಾಗದಲ್ಲಿ ಮಾತ್ರ ಸಂರಕ್ಷಣಾ ಕಾರ್ಯ ಕೈಗೊಳ್ಳಬಹುದು, 4156 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಗ್ರಾಮಗಳೆಂದು ವರದಿ ಗುರುತಿಸಿದೆ. ಗ್ರಾಮಗಳಲ್ಲಿ ಮರಳು ತೆಗೆದಯುವುದು, ಕಲ್ಲು ಕ್ವಾರಿ ನಡೆಸುವುದು, ಯಾವ ಬಗೆಯ ಗಣಿಗಾರಿಕೆಗೂ ಅವಕಾಶವಿರುವುದಿಲ್ಲ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವಂತಿಲ್ಲ, ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡುವ 45 ರೆಡ್ ಕೆಟಗರಿ ಸೇರಿದ ಕೈಗಾರಿಕೆಗಳನ್ನು ಸ್ಥಾಪಿಸುವಂತಿಲ್ಲ .
ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರಡು ಅಧಿಸೂಚನೆ ಆಕ್ಷೇಪಣೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪರಿಸರ ಸೂಕ್ಷ್ಮ ಘೋಷಣೆಗೆ ಕರ್ನಾಟಕ, ಕೇರಳ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈಗ ಸರ್ಕಾರಗಳ ನಿಲುವು ಏನು ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
ಪಶ್ಚಿಮ ಘಟ್ಟದ ಗಣಿಗಾರಿಕೆ: ವಾಣಿಜ್ಯ ಚಟುವಟಿಕೆಗಳಿಗೆ ಶೀಘ್ರ ಬ್ರೇಕ್
ಸೂಕ್ಷ್ಮ ಗ್ರಾಮಗಳು
ಉಡುಪಿ ಜಿಲ್ಲೆಯ ಕಾರ್ಕಳದ 13, ಕುಂದಾಪುರದ 24 ಗ್ರಾಮಗಳು ಸೇರಿ ಕರ್ನಾಟಕದಲ್ಲಿ ಒಟ್ಟು 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕುಂದಾಪುರ ಹಾಗೂ ಕಾರ್ಕಳ ತಾಲೂಕಿನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ಕುಂದಾಪುರ ತಾಲೂಕಿನ ವಂಡ್ಸೆ, ಚಿತ್ತೂರು, ಆಲೂರು, ಕೊಲ್ಲೂರು, ಬೈಂದೂರು, ಗೋಳಿಹೊಳೆ ಕೆರಾಡಿ, ಹಳ್ಳಿಹೊಳೆ, ಎಡಮೊಗೆ, ಬೆಳ್ಳಾಲ, ಹೊಸಂಗಡಿ, ಮಚ್ಚಟ್ಟು, ಅಮಸೆಬೈಲು, ಶೇಡಿಮನೆ, ಮಡಾಮಕ್ಕಿ ಬೆಳ್ವೆ.
ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್
ಪಶ್ಚಿಮಘಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದ ಸೇರಿ ಒಟ್ಟು 6 ರಾಜ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಅಪರೂಪದ ಜೀವ ವೈವಿಧ್ಯವನ್ನು ಹೊಂದಿರುವ ಪಶ್ಚಿಮಘಟ್ಟ ಶ್ರೇಣಿಯ ಪೈಕಿ 57 ಸಾವಿರ ಚದರ ಕಿ.ಮೀ ವ್ಯಾಪ್ತಿಯಷ್ಟು ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ನಿರ್ಧರಿಸಿದೆ. ಈ ಕುರಿತು ಕರಡು ಸಿದ್ಧವಾಗಿದೆ. ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲಿನ ಕ್ವಾರಿ, ವಿದ್ಯುತ್ ಉತ್ಪಾದನೆಯಂತಹ ಯೋಜನೆಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಲಿವೆ. ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ತೊಂದರೆ ಉಂಟು ಮಾಡುವಂತಹ ಚಟುವಟಿಕೆಗಳಿಗೆ ಪರಿಸರ ಅನುತಿ ನೀಡದಂತೆ ಆರು ರಾಜ್ಯಗಳಿಗೆ ನಿರ್ಬಂಧ ವಿಧಿಸಿ ಸೆ.4ರಂದು ಆದೇಶ ಹೊರಡಿಸಿತ್ತು.