ಮತ್ತೆ ಭುಗಿಲೆದ್ದ ಸಾವರ್ಕರ್ ಫೋಟೊ ವಿವಾದ: ಶಿವಮೊಗ್ಗದಲ್ಲಿ ಲಘು ಲಾಠಿ ಪ್ರಹಾರ, ನಿಷೇಧಾಜ್ಞೆ
ಶಿವಮೊಗ್ಗ, ಆಗಸ್ಟ್ 14: ನಗರದಲ್ಲಿ ಮತ್ತೆ ಸಾವರ್ಕರ್ ಫೋಟೊ ವಿವಾದ ಭುಗಿಲೆದ್ದಿದೆ. ಕೆಲವು ಕಿಡಿಗೇಡಿಗಳು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಟ್ಟಿದ್ದ ವೀರ್ ಸಾವರ್ಕರ್ ಫ್ಲೆಕ್ಸ್ ತೆಗೆದಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಅಮೀರ್ ಅಹಮದ್ ಸರ್ಕಲ್ನಲ್ಲಿ ವಿ.ಡಿ.ಸಾವರ್ಕರ್ ಫೋಟೊ ಕಟ್ಟಲಾಗಿತ್ತು. ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಸಾವರ್ಕರ್ ಫೋಟೊ ಕಟ್ಟಿರುವ ಜಾಗದಲ್ಲಿ ಟಿಪ್ಪು ಸುಲ್ತಾನ್ ಫೋಟೊ ಹಾಕಲು ಮುಂದಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ ಸಾವರ್ಕರ್ ಫೋಟೋ!
ಅಮೀರ್ ಅಹಮದ್ ಸರ್ಕಲ್ನಲ್ಲಿ ವಿ.ಡಿ.ಸಾವರ್ಕರ್ ಅವರ ಫ್ಲೆಕ್ಸ್ ಇದ್ದಲ್ಲಿ ಟಿಪ್ಪು ಸುಲ್ತಾನ್ ಅವರ ಫೋಟೊ ಕಟ್ಟಲು ಮುಸ್ಲಿಂ ಸಮುದಾಯದ ಯುವಕರು ಮುಂದಾಗಿದ್ದಾರೆ. ಪೊಲೀಸರು ಆ ಯುವಕರನ್ನು ತಡೆದಿದ್ದಾರೆ. ಈ ವೇಳೆ ಸರ್ಕಲ್ಗೆ ನುಗ್ಗಿದ ಕಿಡಿಗೇಡಿಗಳು ವಿ.ಡಿ.ಸಾವರ್ಕರ್ ಅವರ ಫ್ಲೆಕ್ಸ್ ತೆರವು ಮಾಡಿದ್ದಾರೆ. ಕೂಡಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಫ್ಲೆಕ್ಸ್ ಕಿತ್ತವರನ್ನು ವಶಕ್ಕೆ ಪಡೆದಿದ್ದಾರೆ.
ವಿ.ಡಿ.ಸಾವರ್ಕರ್ ಫೋಟೋ ವಶ ಪಡೆದ ಪೊಲೀಸರು
ಇತ್ತ ವಿ.ಡಿ.ಸಾವರ್ಕರ್ ಫೋಟೋ ತೆಗೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಲ್ನಲ್ಲೆ ಫ್ಲೆಕ್ಸ್ ಕಟ್ಟಬೇಕು ಎಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಡದಿದ್ದಾಗ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಸಾವರ್ಕರ್ ಫ್ಲೆಕ್ಸ್ಅನ್ನು ಪೊಲೀಸರು ವಶಕ್ಕೆ ಪಡೆದರು. ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಅಮೀರ್ ಅಹಮದ್ ಸರ್ಕಲ್ನಲ್ಲಿ ಧರಣಿ ಆರಂಭಿಸಿದರು.
ಎರಡು ದಿನ ನಿಷೇಧಾಜ್ಞೆ ಜಾರಿ
ಪರಿಸ್ಥಿತಿ ತಿಳಿಗೊಳಿಸಿರುವ ಪೊಲೀಸರು ಪ್ರಸ್ತುತ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.
ಸೆಂಟ್ರಲ್ ಮಾಲ್ನಲ್ಲಿ ಸಾವರ್ಕರ್ ಫೋಟೋ ವಿವಾದ
ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ ಸೆಂಟ್ರಲ್ ಮಾಲ್ನಲ್ಲಿ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಫೋಟೋ ಪ್ರದರ್ಶನ ಆಯೋಜಿಸಲಾಗುತ್ತು. ಆದರೆ ಭಾವಚಿತ್ರಗಳ ಪೈಕಿ ಮುಸ್ಲಿಂ ಹೋರಾಟಗಾರರನ್ನು ಕಡೆಗಣಿಸಲಾಗಿದೆ ಎಂದು ಆಸಿಫ್ ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿ. ಡಿ. ಸಾರ್ವರ್ಕರ್ ಅವರ ಭಾವಚಿತ್ರ ಅಳವಡಿಸಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ ಕಿಡಿ ಕಾರಿದ್ದರು ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ವೈರಲ್ ಆಗಿತ್ತು.
ಆಸಿಫ್ ಮತ್ತು ಆತನ ಸಹಚರರ ವಿರುದ್ಧ ದೂರು
ವಿಡಿ ಸಾವರ್ಕರ್ ಫೋಟೋವನ್ನು ತೆಗೆಸಿದ್ದರಿಂದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಸಿಟಿ ಸೆಂಟರ್ ಮಾಲ್ ಮುಂದೆ ಧರಣಿ ನಡೆಸಿದರು. ಆಸಿಫ್ ಮತ್ತು ಆತನ ಸಂಗಡಿಗರನ್ನು ಬಂಧಿಸಬೇಕು ಆಗ್ರಹಿಸಿದ್ದರು. ಭಾವಚಿತ್ರ ಪ್ರದರ್ಶನದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಆರೋಪ ಸಂಬಂಧ ಆಸಿಫ್ ಮತ್ತು ಆತನ ಸಹಚರರ ವಿರುದ್ಧ ಪಾಲಿಕೆ ವತಿಯಿಂದ ದೂರು ನೀಡಲಾಗಿತ್ತು. ಐಪಿಸಿ ಸೆಕ್ಷನ್ 341, 353 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಸ್ವಾತಂತ್ರ್ಯೋತ್ಸವದ ದಿನದಂತೆ ಮತ್ತೆ ಅದೇ ಘಟನೆ ನಡೆದಿದ್ದು, ಸ್ಥಳದಲ್ಲಿ ನಿಷೇದಾಜ್ಞೆ ಹೊರಡಿಸಲಾಗಿದೆ.