ಸಹ್ಯಾದ್ರಿ ಕಾಲೇಜು ಡ್ರೆಸ್ ಕೋಡ್ ಕಿರಿಕಿರಿ, ಮೂವರ ಬಂಧನ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿನ ಸಮವಸ್ತ್ರ ಸಂಹಿತೆ ವಿವಾದದ ಕುರಿತಂತೆ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶ ಹರಿಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ
ಶಿವಮೊಗ್ಗ, ಫೆಬ್ರವರಿ 05: ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿನ ಸಮವಸ್ತ್ರ ಸಂಹಿತೆ ವಿವಾದದ ಕುರಿತಂತೆ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶ ಹರಿಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಅಭಿನವ್ ಖರೆ ಹೇಳಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸೇರಿದಂತೆ ಯಾವುದೇ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿಲ್ಲ ಎಂದು ಉಪಕುಲಪತಿಗಳು ಹೇಳಿದ್ದಾರೆ.
ಎಚ್ಚರಿಕೆ: ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಎಚ್ಚರಿಕೆ ನೀಡಿದ್ದಾರೆ.
ವಾಟ್ಸಪ್ ಗ್ರೂಪ್ನಲ್ಲಿ ಸಂದೇಶ ಹಾಕಿದರೆ ಅಡ್ಮಿನ್ ವಿರುದ್ಧ ಕ್ರಮ ಕ್ರಮ ಕೈಗೊಳ್ಳಲಾಗುತ್ತೆ. ದುಬೈನಿಂದ ಧಮ್ಕಿ ಹಾಕಿದ ಯುವಕರಿಗೆ ಲುಕೌಟ್ ನೋಟಿಸ್ ಜಾರಿ ಮಾಡಲಾಗುವುದು, ಬಂಧಿತರ ವಿರುದ್ಧ ಸ್ವಯಂ ಪ್ರೇರಿತರಾಗಿ ಐಪಿಸಿ 153ಎ, 504, 505 ಹಾಗೂ 507 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅಭಿನವ್ ತಿಳಿಸಿದರು.
ಘಟನೆ ಹಿನ್ನಲೆ: ಇತ್ತೀಚೆಗೆ ಸಹ್ಯಾದ್ರಿ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಬುರ್ಖಾ ಧರಿಸಿ ಬರುವುದನ್ನು ಎಬಿವಿಪಿ ಸಂಘಟನೆ ವಿರೋಧಿಸಿತ್ತು. ಕೇಸರಿ ವಸ್ತ್ರ ಧರಿಸಿ ಬರುವುದಾಗಿ ಘೋಷಿಸಿತ್ತು. ಆದರೆ, ಕಾಲೇಜಿನಲ್ಲಿ ಯಾವುದೇ ವಸ್ತ್ರಸಂಹಿತೆ ಅಧಿಕೃತವಾಗಿ ಜಾರಿಯಲ್ಲಿಲ್ಲ. ಈ ಘಟನೆ ನಂತರ ದುಷ್ಕರ್ಮಿಗಳು ಎರಡು ಕೋಮುಗಳ ನಡುವೆ ದ್ವೇಷ ಮೂಡುವಂಥ ಸಂದೇಶಗಳನ್ನು ವಾಟ್ಸಪ್ ಮೂಲಕ ಕಳೆದ ಮೂರು ದಿನಗಳಿಂದ ಹರಡುತ್ತಿದ್ದರು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಸೋಮವಾರದಂದು ಯಾವುದೇ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.