"ಬಿಜೆಪಿಯಲ್ಲಿ ಬಿಎಸ್ವೈ ಸಮಾನ ರಾಜಕಾರಣಿ ಯಾರಿದ್ದಾರೆ ತೋರಿಸಿ''
ಶಿವಮೊಗ್ಗ, ಜನವರಿ 11: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಮಾನ ರಾಜಕಾರಣಿ ಯಾರಿದ್ದಾರೆ ತೋರಿಸಲಿ ಎಂದು ಸಿಎಂ ಬದಲಾವಣೆ ಕುರಿತು ಮಾತನಾಡುವವರಿಗೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಪರೋಕ್ಷ ಸವಾಲ್ ಎಸೆದರು.
ಶಿಕಾರಿಪುರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಅಭಿನಂದನೆ ಮತ್ತು ಸನ್ಮಾನ ಸಮಾರಂಭವದಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ: ಯಾರು? ಎಲ್ಲಿ? ಏನಂದ್ರು?
ಬಿ.ಎಸ್ ಯಡಿಯೂರಪ್ಪನವರು ಸಿಎಂ ಆದಾಗಿನಿಂದಲೂ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿದೆ. ಆದರೆ ಸಿಎಂ ಯಡಿಯೂರಪ್ಪನಂಥ ಸಮರ್ಥ ನಾಯಕರು ನಮ್ಮ ಪಕ್ಷದಲ್ಲಿ ಯಾರಿದ್ದಾರೆ ತಿಳಿಸಿ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ ಯಡಿಯೂರಪ್ಪ. ಅವರು ಪಕ್ಷಕ್ಕಾಗಿ ಜೀವವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ. ಆದರೆ ವಿರೋಧ ಪಕ್ಷದವರು ಹಾಗೂ ನಮ್ಮ ಪಕ್ಷದ ಕೆಲವರು ಸೇರಿದಂತೆ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಕೇಳಿ ನಮಗೆ ಬೇಸರವಾಗಿತ್ತು. ಇಂದಿನ ಪತ್ರಿಕೆಗಳನ್ನು ನೋಡಿ ಸಮಾಧಾನವಾಗಿ ಎಲ್ಲಾ ಬಾಯಿ ಮುಚ್ಚಿದಂತಾಗಿದೆ ಎಂದು ತಿಳಿಸಿದರು.
ಎಲ್ಲಾ ರೀತಿಯ ಊಹಾಪೋಹಗಳಿಗೂ ಹೈಕಮಾಂಡ್ ತೆರೆ ಎಳೆದಿದೆ. ಬಿ.ಎಸ್.ವೈ ಅವರೆ ಅವಧಿ ಮುಗಿಯುವವರೆಗೂ ಮುಂದುವರಿಯಲ್ಲಿದ್ದಾರೆ. ಗೋ ಹತ್ಯೆ ನಿಷೇಧ ಪರಿಣಾಮ ಗೋ ತಾಯಿಯ ಆಶೀರ್ವಾದದಿಂದ ಅವರ ಸ್ಥಾನ ಭದ್ರವಾಗಿದೆ. ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿ ಆಗಿ ಇರಲಿದ್ದು, ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡುತ್ತಾರೆ ಎಂದರು.