ಕೋರ್ಟ್ ಮಧ್ಯಪ್ರವೇಶದಿಂದ ಸಿಗಂದೂರು ದೇವಸ್ಥಾನ ವಿವಾದ ಸುಖಾಂತ್ಯ
ಶಿವಮೊಗ್ಗ, ಅಕ್ಟೋಬರ್ 22: ಸಾಗರ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಸಿಗಂದೂರಿನ ದೇವಾಲಯದಲ್ಲಿ ನವರಾತ್ರಿ ಹಾಗೂ ಮುಂದೆ ನಡೆಯುವ ಪೂಜಾ ವಿಧಿ-ವಿಧಾನಗಳ ಕುರಿತು ಉದ್ಭವಗೊಂಡ ವಿವಾದ ಸುಖಾಂತ್ಯ ಕಂಡಿದೆ. ಹಾಗಂತ ಎಲ್ಲವೂ ಸುಖಾಂತ್ಯ ಕಂಡಿಲ್ಲ. ಪೂಜಾ ವಿಧಿ-ವಿಧಾನಕ್ಕೆ ಮಾತ್ರ ತೆರೆ ಬಿದ್ದಿದೆ.
ಕಳೆದ ಕೆಲವು ತಿಂಗಳುಗಳಿಂದ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಪೂಜಾ ಕೈಂಕರ್ಯ ಹಾಗೂ ನವರಾತ್ರಿ ಪೂಜೆಗೆ ಸಂಬಂಧಪಟ್ಟಂತೆ ಉದ್ಭವಿಸಿದ್ದ ವಿವಾದ ಸಾಗರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಬುಧವಾರ ಸುಖಾಂತ್ಯಗೊಂಡಿದೆ.
ಸಿಂಗದೂರು ದೇವಿ ನಮಗೆ ಸೇರಿದವಳು, ವಿಗ್ರಹ ನಮಗೆ ಕೊಡಿ: ಮತ್ತೊಂದು ಕುಟುಂಬದ ಬೇಡಿಕೆ
ದೇವಸ್ಥಾನದ ಭಕ್ತರಾದ ಸಂದೀಪ್ ಜೈನ್ ಹುಲಿದೇವರಬನ ಹಾಗೂ ನವೀನ್ ಜೈನ್ ಕೊಪ್ಪ ಎಂಬುವವರು ದೇವಸ್ಥಾನದ ಪೂಜಾ ವಿಧಿ-ವಿಧಾನಗಳನ್ನು ನಡೆಸಲು ಅರ್ಚಕ ಶೇಷಗಿರಿ ಭಟ್ಟರಿಗೆ ಯಾವುದೇ ರೀತಿಯ ಅಡ್ಡಿ ಆತಂಕ ಉಂಟು ಮಾಡಬಾರದು ಎಂದು ಧರ್ಮದರ್ಶಿ ರಾಮಪ್ಪ ಮತ್ತು ಅವರ ಪುತ್ರ ರವಿಕುಮಾರ್ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ಕೋರಿ ಸೋಮವಾರ ದಾವೆ ದಾಖಲಿಸಿದ್ದರು.
ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸೂಚನೆ
ಈ ದಾವೆಗೆ ಸಂಬಂಧಿಸಿದಂತೆ ದಾವೆ ಹೂಡಿದ್ದ ಪಕ್ಷಗಾರರು ದೇವಾಲಯದ ಧರ್ಮದರ್ಶಿ ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್ ಹಾಗೂ ಅರ್ಚಕ ಶೇಷಗಿರಿ ಭಟ್ ಅವರನ್ನು ಬುಧವಾರ ನ್ಯಾಯಾಲಯಕ್ಕೆ ಕರೆಯಿಸಿದ ನ್ಯಾಯಾಧೀಶರಾದ ಫೆಲಿಕ್ಸ್ ಆಲ್ಫಾನ್ಸೋ ಅಂತೋನಿಯವರು ಮಧ್ಯಸ್ಥಗಾರಿಕೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು.
ನಲವತ್ತು ಭಕ್ತರ ಉಪಸ್ಥಿತಿ ಮಾತ್ರ ಇರಬೇಕು
ಉಭಯ ಪಕ್ಷಗಾರರ ವಕೀಲರ ಹಾಗೂ ನ್ಯಾಯಾಲಯ ನೇಮಿಸಿದ ಮಧ್ಯಸ್ಥಗಾರರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ರಾಜಿ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು. ಕೋವಿಡ್-19ರ ಸಂದರ್ಭದಲ್ಲಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ ನಲವತ್ತು ಭಕ್ತರ ಉಪಸ್ಥಿತಿ ಮಾತ್ರ ಇರಬೇಕು.
ರಾಮಪ್ಪನವರ ಕುಟುಂಬದವರೊಂದಿಗೆ ಹೋಮ
ಈ ಭಕ್ತರು ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಅಂಶಕ್ಕೆ ರಾಮಪ್ಪ, ರವಿಕುಮಾರ್ ಮತ್ತು ಶೇಷಗಿರಿ ಭಟ್ ಸಮ್ಮತಿ ಸೂಚಿಸಿದ್ದಾರೆ. ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇಟ್ಟು ಅದಕ್ಕೆ ನಮಸ್ಕರಿಸಲು ಭಕ್ತರಿಗೆ ಅವಕಾಶ ನೀಡಬೇಕು. ಅರ್ಚಕರು ಅದನ್ನು ಎಲ್ಲಾ ಭಕ್ತರ ಎದುರು ಕೊಂಡೊಯ್ಯಬಾರದು. ದಸರಾ ಹಬ್ಬದ ಅಂಗವಾಗಿ ಅರ್ಚಕ ಶೇಷಗಿರಿ ಭಟ್ ಅವರು ತಮ್ಮ ಕುಟುಂಬದವರೊಂದಿಗೆ, ರಾಮಪ್ಪನವರ ಕುಟುಂಬದವರೊಂದಿಗೆ ಹೋಮವನ್ನು ನಡೆಸಬೇಕು ಎಂಬ ಅಂಶಕ್ಕೆ ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ.
ದೇವಸ್ಥಾನದ ಪೂಜೆ ಹಾಗೂ ಇತರೆ ಚಟುವಟಿಕೆಗಳ ಮುಂದುವರೆಕೆ
ದೇವಾಲಯಕ್ಕೆ ದೇವಿಯ ದರ್ಶನಕ್ಕೆ ಬರುವ ಎಲ್ಲ ಭಕ್ತರು ಸರ್ಕಾರ ಸೂಚಿಸಿದ ಕೋವಿಡ್-19 ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಕೋವಿಡ್ ಪಿಡುಗು ಮುಕ್ತಾಯವಾದ ನಂತರ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ಟರು ಪರಸ್ಪರ ಹೊಂದಾಣಿಕೆ ಮೂಲಕ ದೇವಸ್ಥಾನದ ಪೂಜೆ ಹಾಗೂ ಇತರೆ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಲು ಸಮ್ಮತಿ ಸೂಚಿಸಿದ್ದಾರೆ.
ನ್ಯಾಯಾಲಯದ ಸೂಚನೆಯಂತೆ ಮಧ್ಯಸ್ಥಗಾರರ ಮಧ್ಯಸ್ಥಿಕೆಯಲ್ಲಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿ ಭಟ್ ಅವರು ಹೊಂದಿಕೊಂಡು ಹೋಗಲು ಸಮ್ಮತಿ ಸೂಚಿಸಿದ್ದರಿಂದ ದಾವೆಯನ್ನು ದಾಖಲಿಸಿದ್ದ ಸಂದೀಪ್ ಮತ್ತು ನವೀನ್ ಜೈನ್ ತಮ್ಮ ದಾವೆಯನ್ನು ಹಿಂದಕ್ಕೆ ಪಡೆದಿದ್ದಾರೆ.