ಮನೆಯ ಮೇಲೆ ಕೈತೋಟ ಬೆಳೆಸಿದ ಕೃಷಿ ನಗರದ ಕುಮಾರಯ್ಯ!
ಶಿವಮೊಗ್ಗ, ಜುಲೈ 04 : ಮನೆ ಮಹಡಿ ಮೇಲೆ ಸಣ್ಣ ಗಿಡ ಬೆಳೆದರೆ ಸಾಕು ತೆಗೆದು ಹಾಕುತ್ತೇವೆ. ಮರದ ಬೇರು ಗೋಡೆಯೊಳಗೆ ಸೇರಿ ಕಟ್ಟಡ ಸೋರುತ್ತದೆ ಎಂಬ ಆತಂಕ ಜನರದ್ದು. ಸೂಕ್ತ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ, ನಿರ್ವಹಣೆ ಮಾಡಿದರೆ ಮನೆಯ ಮೇಲೆ ಸುಂದರವಾದ ಕೈತೋಟ ನಿರ್ಮಿಸಬಹುದು.
ಶಿವಮೊಗ್ಗದ ಕೃಷಿ ನಗರದ 2ನೇ ತಿರುವಿನ ನಿವಾಸಿ ಕುಮಾರಯ್ಯ ಅವರು ಮನೆಯ ಮಹಡಿ ಮೇಲೆ ಅಚ್ಚುಕಟ್ಟಾದ ಕೈ ತೋಟ ನಿರ್ಮಿಸಿ ತೋರಿಸಿದ್ದಾರೆ. ಜಿಲ್ಲಾಡಳಿತ ನೀಡುವ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪರಿಸರ ಸ್ನೇಹಿ ಮನೆ ನೋಡಿ ಸಂತಸ ಪಟ್ಟ ಜಿಲ್ಲಾಧಿಕಾರಿಗಳು
ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಕೃಷಿ ನಗರದಲ್ಲಿರುವ ಕುಮಾರಯ್ಯ ಅವರ ಮನೆಗೆ ಭೇಟಿ ನೀಡಿ ಕೈತೋಟವನ್ನು ವೀಕ್ಷಣೆ ಮಾಡಿದರು. ತೋಟ ಬೆಳೆಸುವ ಕುರಿತು ಮಾಹಿತಿಗಳನ್ನು ಪಡೆದರು. ಕುಮಾರಯ್ಯ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್
ಕುಮಾರಯ್ಯ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಕೃಷಿ ನಗರದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆಯ ತಾರಸಿಯ ಮೇಲೆ ಒಂದು ಸುಂದರ ತೋಟವನ್ನು ನಿರ್ಮಿಸಿಕೊಂಡಿದ್ದಾರೆ.
ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ ಉಡುಪಿ ಜಿಲ್ಲಾಧಿಕಾರಿ
ಥರ್ಮಾಕೋಲ್ ಬಾಕ್ಸ್ ಗಳಲ್ಲಿ ಗಿಡ
ಕುಮಾರಯ್ಯ ಅವರು ಮನೆಯ ಮಹಡಿ ಮೇಲೆ ಔಷಧ ಸಸ್ಯಗಳು, ತರಕಾರಿಗಳು, ಆಯುರ್ವೇದಿಕ್ ಸಸ್ಯಗಳು ಹಾಗೂ ವಿವಿಧ ಜಾತಿಯ ಗಿಡಗಳನ್ನು ನಂಬಲು ಅಸಾಧ್ಯವಾದಂತೆ ಥರ್ಮಾಕೋಲ್ ಬಾಕ್ಸ್ ಗಳಲ್ಲಿ ಮಣ್ಣು ತುಂಬಿಸಿ ಅದರಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಗಿಡಗಳನ್ನು ಈ ಮಾದರಿಯಲ್ಲಿಯೂ ಬೆಳೆಸಬಹುದು ಎಂದು ತೋರಿಸಿದ್ದಾರೆ.
ನೀರಿನ ತೊಟ್ಟಿಯಲ್ಲಿ ಆಮೆ, ಗಿಡದಲ್ಲಿ ಜೇನು
ಕುಮಾರಯ್ಯ ಅವರು ಮನೆಗೆ ಬೇಕಾದಂತಹ ನೀರಿನ ಸಂಗ್ರಹಣೆಯ ತೊಟ್ಟಿಯಲ್ಲಿ ಆಮೆಯನ್ನು ಸಾಕಿದ್ದಾರೆ. ಇದರಿಂದಾಗಿ ನೀರು ಮಲಿನವಾಗದೆ ಸ್ವಚ್ಛತೆಯಿಂದ ಕೂಡಿರುತ್ತದೆ. ಮನೆಯ ಮೇಲಿನ ಗಿಡಗಳಲ್ಲಿ ಜೇನು ಕಟ್ಟಿರುವುದು ವಿಶೇಷವಾಗಿದೆ. ಗಿಡದಲ್ಲಿ ಬರುವಂತಹ ಕಳೆಯನ್ನು ಹಳೆಯ ಬಕೆಟ್ನಲ್ಲಿ ಹಾಕಿಡುತ್ತಾರೆ. ಅದು ಕೊಳೆತ ನಂತರ ಆ ನೀರನ್ನು ಗಿಡಗಳಿಗೆ ಸಿಂಪಡಿಸಲಾಗುತ್ತದೆ.
ಮನೆಯ ಮಹಡಿ ಸೋರದಂತೆ ಕ್ರಮ
ಕುಮಾರಯ್ಯ ಅವರು ತಮ್ಮ ಮನೆಯ ಮಹಡಿ ಸೋರದಂತೆ ಅತ್ಯಾಧುನಿಕ ರೀತಿಯ ಮುಂದಾಲೋಚನೆಯಿಂದ ಮನೆಯ ತಾರಸಿಯನ್ನು ಸುಭದ್ರವಾಗಿ ಇರಿಸಿಕೊಳ್ಳುವ ಬಗ್ಗೆ ಪರಿಹಾರವನ್ನು ಸಹ ತಾವೇ ಕಂಡುಕೊಂಡಿದ್ದಾರೆ. ಗಿಡಗಳಿಗೆ ಸಿಂಪಡನೆ ಮಾಡುವ ಔಷಧವನ್ನು ಸಹ ಅವರು ತಾವೇ ತಯಾರಿಸುತ್ತಾರೆ.
11ನೇ ಪರಿಸರ ಪ್ರಶಸ್ತಿ
ಮನೆಯ ಮುಂದೆ ಬರುವಂತಹ ಬೀದಿ ದನಗಳಿಗೆ ಆಹಾರವನ್ನು ನೀಡಿ ಗೋಮೂತ್ರ, ಸಗಣಿಯನ್ನು ಸಂಗ್ರಹಣೆ ಮಾಡಿಕೊಂಡು, ಮನೆಯ ತಾರಸಿಯ ಮೇಲೆ ಇಟ್ಟಿರುವಂತಹ ದೊಡ್ಡ ಡ್ರಮ್ಮಿನಲ್ಲಿ ಸಂಗ್ರಹಿಸಿ, ಗಿಡಗಳಿಗೆ ಬೇಕಾಗುವಂತಹ ಔಷಧಿಯನ್ನು ತಯಾರಿಸುತ್ತಾರೆ. ಕುಮಾರಯ್ಯ ಅವರ ಮನೆಯನ್ನು ನೋಡಿದ ಜಿಲ್ಲಾಡಳಿತ 11ನೇ ದಿನದ "ಪರಿಸರಸ್ನೇಹಿ ಕುಟುಂಬ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.