ಶಿವಮೊಗ್ಗ ರಾಜಕಾರಣ : ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ಗೆ?
ಶಿವಮೊಗ್ಗ, ಡಿಸೆಂಬರ್ 01 : ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ರಾಜಕಾರಣ ರಂಗೇರುತ್ತಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಜೆಡಿಎಸ್ ಸೇರುವ ಸಾಧ್ಯತೆ ಇದ್ದು, ತೀರ್ಥಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಸಾಮಾಜಿಕ ತಾಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ವಿದಾಯ ಭಾಷಣ
ನವೆಂಬರ್ 28ರಂದು ಬೇಗುವಳ್ಳಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮದನ್ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆ ನಡೆದಿದೆ. ಆರ್.ಎಂ.ಮಂಜುನಾಥ ಗೌಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ, ಅವರು ಪಕ್ಷ ಸೇರಬಹುದು ಎಂದು ಸುದ್ದಿಗಳು ಹಬ್ಬಿವೆ.
ಆರ್.ಎಂ.ಮಂಜುನಾಥ ಗೌಡರು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಆರ್.ಮದನ್ ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂಬ ಮಾತುಗಳು ಕೇಳಿಬರುತ್ತಿದ್ದವು. 2013ರ ಚುನಾವಣೆಯಲ್ಲಿಯೂ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಚಿತ್ರಗಳಲ್ಲಿ : ತೀರ್ಥಹಳ್ಳಿಯಲ್ಲಿ ವಿಶ್ವದರ್ಜೆಯ ಚತುಷ್ಪಥ ರಸ್ತೆ
ತೀರ್ಥಹಳ್ಳಿ ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿದೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಕ್ಷೇತ್ರದ ಶಾಸಕರು. ಮುಂದಿನ ಚುನಾವಣೆಗೂ ಅವರು ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ 2018ರ ಚುನಾವಣೆಗೆ ಆರಗ ಜ್ಞಾನೇಂದ್ರ ಅವರು ಬಿಜೆಪಿ ಅಭ್ಯರ್ಥಿ......
ಕೆಜೆಪಿಯಿಂದ ಸ್ಪರ್ಧಿಸಿದ್ದರು
2013ರ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡ ಅವರು ಕೆಜೆಪಿ ಪಕ್ಷದಿಂದ ಕಿಮ್ಮನೆ ರತ್ನಾಕರ ವಿರುದ್ಧ ಸ್ಪರ್ಧಿಸಿದ್ದರು. 35,817 ಮತಗಳನ್ನು ಪಡೆದು ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಕಿಮ್ಮನೆ ರತ್ನಾಕರ ಅವರು 37,160 ಮತಗಳನ್ನು ಪಡೆದಿದ್ದರು.
ಆರ್.ಮದನ್ ಸಹಮತ
2013ರ ಚುನಾವಣೆಯಲ್ಲಿ ಆರ್.ಮದನ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 21,295 ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ ಗೌಡರು ಸ್ಪರ್ಧಿಸಲಿ ಎಂದು ಅವರೇ ಹೇಳುತ್ತಿದ್ದಾರೆ. ಆದ್ದರಿಂದ, ಮಂಜುನಾಥ ಗೌಡರು ಜೆಡಿಎಸ್ ಸೇರಬಹುದು ಎಂದು ಅಂದಾಜಿಸಲಾಗಿದೆ.
ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆ
ಡಿಸೆಂಬರ್ 2ನೇ ವಾರದಲ್ಲಿ ಮಂಜುನಾಥ ಗೌಡ ಮತ್ತು ಅವರ ಬೆಂಬಲಿಗರು ಎಚ್.ಡಿ.ದೇವೇಗೌಡ ಸಮ್ಮುಖದಲ್ಲಿ ಪಕ್ಷ ಸೇರುವ ಸಾಧ್ಯತೆ ಇದೆ. ಮಂಜುನಾಥ ಗೌಡರು ಜೆಡಿಎಸ್ ಸೇರಿದರೆ ಕ್ಷೇತ್ರದ ರಾಜಕೀಯ ಕುತೂಹಲಕ್ಕೆ ಕಾರಣವಾಗಲಿದೆ.
ಕಿಮ್ಮನೆ, ಆರಗ, ಮಂಜುನಾಥ ಗೌಡ
2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಆರಗ ಜ್ಞಾನೇಂದ್ರ ಮತ್ತು ಕಿಮ್ಮನೆ ರತ್ನಾಕರ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಇಬ್ಬರು ಕಾರ್ಯಕರ್ತರ ಬೃಹತ್ ಬೆಂಬಲ ಹೊಂದಿದ್ದಾರೆ. ಇವರ ನಡುವೆ ಮಂಜುನಾಥ ಗೌಡರು ಸ್ಪರ್ಧೆಗಿಳಿದರೆ ರಾಜಕೀಯ ಕಣ ಕುತೂಹಲಕ ಮೂಡಿಸಲಿದೆ.
ಜ್ಞಾನೇಂದ್ರ ಅವರಿಗೆ ಗೆಲುವು?
ಬಿ.ಎಸ್.ಯಡಿಯೂರಪ್ಪ ಅವರ ಅಲೆ ಕೆಲಸ ಮಾಡಿದರೆ ಆರಗ ಜ್ಞಾನೇಂದ್ರ ಗೆಲುವು ಸಾಧಿಸಲಿದ್ದಾರೆ. 2004ರ ಚುನಾವಣೆಯಲ್ಲಿ 47,843 ಮತಗಳನ್ನು ಪಡೆದು ಅವರು ಗೆದಿದ್ದರು. 2008ರಲ್ಲಿ 54,106 ಮತಗಳನ್ನು ಪಡೆದು, 2013ರ ಚುನಾವಣೆಯಲ್ಲಿ 34,446 ಮತಗಳನ್ನು ಪಡೆದು ಸೋತಿದ್ದರು.
ಮೂವರು ಶಾಸಕರಿದ್ದಾರೆ
2013ರ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಜಯಗಳಿಸಿದೆ. ಸೊರಬ - ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ - ಶಾರದಾ ಪೂರ್ಯನಾಯ್ಕ, ಭದ್ರಾವತಿ - ಅಪ್ಪಾಜಿ ಗೌಡ ಶಾಸಕರು.