ಶೀಘ್ರದಲ್ಲೇ ಸಂಶೋಧನಾ ಪ್ರಾಧಿಕಾರ ಸ್ಥಾಪನೆ: ಡಿಸಿಎಂ ಅಶ್ವತ್ಥನಾರಾಯಣ
ಶಿವಮೊಗ್ಗ, ಫೆಬ್ರವರಿ 13: ಸಂಶೋಧನಾ ಪ್ರಾಧಿಕಾರ ಸ್ಥಾಪನೆ ಕುರಿತು ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಡಾ.ಅಶ್ವತ್ಥ ನಾರಾಯಣ, ""ಸಂಶೋಧನಾ ಪ್ರಾಧಿಕಾರದ ಮೂಲಕ ಸಂಶೋಧನೆಗೆ ಎದುರಾಗುವ ಕಾನೂನಾತ್ಮಕ ಅಡ್ಡಿಗಳನ್ನು ನಿವಾರಿಸಿ, ಅನ್ವೇಷಣೆಗೆ ಎಲ್ಲ ಅಗತ್ಯ ನೆರವು ಒದಗಿಸಲಾಗುವುದು. ಮುಖ್ಯವಾಗಿ ಸಂಶೋಧನೆ ಕೈಗೊಳ್ಳುವವರಿಗೆ ಅವರ ಸಂಶೋಧನೆ ಅವಧಿಯಲ್ಲಿ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ'' ಎಂದು ಅವರು ವಿವರಿಸಿದರು.
ಮೀನಾಕ್ಷಿ ಭವನದ ದೋಸೆ ಸವಿಯುತ್ತಾ ಶಿವಮೊಗ್ಗ ನಂಟು ಬಿಚ್ಚಿಟ್ಟ ಡಿಸಿಎಂ
"ಸಂಶೋಧನೆಗಳು ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತವಾಗದೇ, ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಹೀಗಾಗದಿದ್ದರೆ ಅದು ಜನರನ್ನು ತಲುಪಲು ಸಾಧ್ಯವಿಲ್ಲ. ಯಾವುದೇ ಸಂಶೋಧನೆಗೆ ಪೇಟೆಂಟ್ ಪಡೆಯಲು ಸರ್ಕಾರ ಆರ್ಥಿಕ ನೆರವು ಒದಗಿಸುತ್ತಿದೆ' ಎಂದರು.
"ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಆದ್ಯತೆ, ಅದಕ್ಕಾಗಿ ಉದ್ಯಮಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು' ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.
ಭಾರತೀಯ ದಂತ ವೈದ್ಯಕೀಯ ಶಿವಮೊಗ್ಗ ಘಟಕದ ಪದಾಧಿಕಾರಿಗಳ ಆಯ್ಕೆ
"ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಧ್ಯಾಪಕರಿಗೆ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಧಾರವಾಡದಲ್ಲಿ ಈಗಾಗಲೇ ತರಬೇತಿ ಸಂಸ್ಥೆ ಇದ್ದು, ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ರೀತಿ ಮತ್ತಷ್ಟು ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ನಮ್ಮ ಸರ್ಕಾರಕ್ಕೆ ಇದೆ. ಹೊಸ ಕಲಿಕಾ ವಿಧಾನ ಹಾಗೂ ಕೌಶಲ ಸುಧಾರಣೆಗೆ ಇದರಿಂದ ನೆರವಾಗುವುದು,"ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
"ನನ್ನ ಹೈಸ್ಕೂಲ್ ಹಾಗೂ ಪದವಿ ಪೂರ್ವ ಶಿಕ್ಷಣ ಆಗಿದ್ದು ಶಿವಮೊಗ್ಗದಲ್ಲೇ, ಇಲ್ಲಿಗೆ ಭೇಟಿ ನೀಡುವುದೇ ನನಗೊಂದು ರೀತಿಯ ಖುಷಿ ವಿಚಾರ. ನನ್ನ ತಂದೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಶಿವಮೊಗ್ಗದ ನಂಟು ಬೆಳೆಯಿತು. ಹಲವಾರು ಮಾದರಿ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇಂದು ನಾನು ಈ ಮಟ್ಟಕ್ಕೆ ಬೆಳೆಯಲು ಇಲ್ಲಿ ಪಡೆದ ಶಿಕ್ಷಣವೂ ಕಾರಣ' ಎಂದು ಹೇಳಿದರು. ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಹಾಗೂ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.