ರಂಜದಕಟ್ಟೆ ಸೇತುವೆ ಸಿದ್ಧ; ಉಡುಪಿ-ಮಂಗಳೂರಿನ ಪ್ರಯಾಣಿಕರು ನಿರಾಳ
ಶಿವಮೊಗ್ಗ, ಸೆಪ್ಟೆಂಬರ್ 29: ತೀರ್ಥಹಳ್ಳಿಯ ರಂಜದ ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಇತ್ತೀಚೆಗೆ ಕುಸಿತ ಕಂಡಿದ್ದು, ವಾಹನ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಲಾಗಿತ್ತು. ಇದೀಗ ತಾತ್ಕಾಲಿಕವಾಗಿ ಸೇತುವೆಯನ್ನು ಸಂಚಾರಕ್ಕೆ ಸಿದ್ಧಪಡಿಸಲಾಗಿದೆ. ಇದರಿಂದಾಗಿ ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗವಾಗಿ ಉಡುಪಿ-ಮಂಗಳೂರಿಗೆ ಸಂಚರಿಸುವವರು ನಿರಾಳರಾಗಿದ್ದಾರೆ.
ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿ 169-A ರಂಜದಕಟ್ಟೆ ಬಳಿ ಸೆಪ್ಟೆಂಬರ್ 24ರಂದು ಸುಮಾರು 100 -120 ವರ್ಷದ ಹಳೆಯ ಸೇತುವೆಯೊಂದು ಮುರಿದು ಬಿದ್ದಿತ್ತು. ಹೀಗಾಗಿ ಉಡುಪಿ-ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ಭಾರೀ ತೊಂದರೆಯಾಗಿತ್ತು.
ಮೂರು ದಿನಗಳಲ್ಲಿ ಸೇತುವೆ ದುರಸ್ತಿ
ಮೂರು ದಿನಗಳ ಹಿಂದೆ ಸೇತುವೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಸೇತುವೆಯನ್ನು ನಿರ್ಮಿಸಲಾಗಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮೂರು ದಿನಗಳಲ್ಲಿ ಸೇತುವೆ ಕಾಮಗಾರಿ ಮುಗಿಸಿದ್ದಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಾಗರೀಕರು, ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ.
ಶಿವಮೊಗ್ಗ: ತೀರ್ಥಹಳ್ಳಿಯ ರಂಜದಕಟ್ಟೆ ಸೇತುವೆ ಕುಸಿತ; ಸಂಚಾರ ಸ್ಥಗಿತ
ಉಡುಪಿ-ಮಂಗಳೂರಿಗೆ ಸಂಚರಿಸುವವರು ನಿರಾಳ
ಈ ಸೇತುವೆ ಕುಸಿದ ಪರಿಣಾಮ ಉಡುಪಿ- ಮಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಮಣಿಪಾಲ್, ಮಂಗಳೂರಿಗೆ ತೆರಳುವ ರೋಗಿಗಳು, ಪ್ರಯಾಣಿಕರು, ಎಲ್ಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ಕಾರಣ ತೊಂದರೆ ಎದುರಾಗಿತ್ತು. ಹೀಗಾಗಿ ಶಾಸಕರು, ಅಧಿಕಾರಿಗಳು ಈ ಕುರಿತು ಗಮನಿಸಬೇಕು ಎಂದು ಆಗ್ರಹಿಸಿದ್ದರು. ಈಗ ಸೇತುವೆ ಸಿದ್ಧಗೊಂಡಿರುವುದು ಈ ಮಾರ್ಗದ ಪ್ರಯಾಣಿಕರಿಗೆ ಸಂತಸ ತಂದಿದೆ.
ಮುಂಚೆಯೇ ಶಿಥಿಲಗೊಂಡಿದ್ದ ಸೇತುವೆ
ತಿರುವಿನಲ್ಲಿ ಈ ಸೇತುವೆ ಇದ್ದು, ಸೇತುವೆಯ ತಡೆಗೋಡೆಗೆ ಇತ್ತೀಚೆಗೆ ವಾಹನವೊಂದು ಗುದ್ದಿ ಜಖಂಗೊಂಡು ಮತ್ತಷ್ಟು ಶಿಥಿಲಗೊಂಡಿತ್ತು. ಇದರ ಪಕ್ಕದಲ್ಲಿಯೇ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತಾದರೂ ಖಾಸಗಿ ವ್ಯಾಜ್ಯದಿಂದಾಗಿ ಹಲವಾರು ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ನೂತನ ಸೇತುವೆ ನಿರ್ಮಾಣಕ್ಕೆ ಈ ಹಿಂದೆಯೇ ಬೇಡಿಕೆ ಇಟ್ಟಿದ್ದರೂ ತಾಲೂಕು ಆಡಳಿತ ಗಮನ ನೀಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಶಿವಮೊಗ್ಗ: ಭಾರಿ ಮಳೆಯಿಂದ ಜೋಗದ ಮನೆಗಳ ಮುಂಭಾಗ ತಡೆಗೋಡೆ ಕುಸಿತ
ತಾತ್ಕಾಲಿಕ ವ್ಯವಸ್ಥೆ
ಸೇತುವೆ ಕುಸಿದಿದ್ದ ಪರಿಣಾಮ ಉಡುಪಿ ಮಂಗಳೂರಿಗೆ ಸಂಚರಿಸುವವರಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿತ್ತು. ಐದು ದಿನಗಳಲ್ಲಿ ಸೇತುವೆ ರಿಪೇರಿ ಕಾಮಗಾರಿ ಮುಗಿದಿದೆ. ಜನಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸಲಾಗಿದೆ. ಸದ್ಯಕ್ಕೆ ಸೇತುವೆ ಮೇಲೆ ಓಡಾಟಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.