ಎಳ್ಳಾಮಾವಾಸ್ಯೆ ಜಾತ್ರೆಗೆ ಭಕ್ತರನ್ನು ಕೈಬೀಸಿ ಕರೆದ ರಾಮೇಶ್ವರ ಸನ್ನಿಧಿ
ಶಿವಮೊಗ್ಗ, ಜನವರಿ 14: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಎಳ್ಳಾಮಾವಾಸ್ಯೆ ಜಾತ್ರೆಗೆ ಇಡೀ ತೀರ್ಥಹಳ್ಳಿ ರಂಗುಗೊಂಡಿದೆ. ತೀರ್ಥಹಳ್ಳಿಯ ಸೌಂದರ್ಯ ಇಮ್ಮಡಿಗೊಂಡಿತ್ತು. ಪಟ್ಟಣದ ಪ್ರಮುಖ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಇನ್ನು ತುಂಗಾ ಸೇತುವೆಗೆ ಸುಣ್ಣ ಬಣ್ಣದ ಅಲಂಕಾರದ ಜೊತೆಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ನದಿ ತೀರ ಸೇರಿದಂತೆ ದೇವಸ್ಥಾನದ ಸುತ್ತಮುತ್ತ ಮತ್ತು ದೇವಸ್ಥಾನ ವಿದ್ಯುತ್ ದೀಪದ ಬಣ್ಣದಲ್ಲಿ ಮಿಂದೆದ್ದಿದೆ ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.
ರಾಜ್ಯದಲ್ಲೇ ಮೊದಲು; ಭದ್ರಾವತಿಯಲ್ಲಿ ಆರ್ಎಎಫ್ ಘಟಕ ಸ್ಥಾಪನೆ
ತೀರ್ಥಹಳ್ಳಿ ತಾಲ್ಲೂಕಿನ ಶ್ರೀ ರಾಮೇಶ್ವರ ದೇವಸ್ಥಾನವು ಜಾತ್ರಾ ಪ್ರಯುಕ್ತ ತನ್ನ ನೋಟವನ್ನೇ ಬದಲಾಯಿಸಿಕೊಂಡಿದ್ದು, ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.
ತೀರ್ಥ ಸ್ನಾನಕ್ಕೆ ಸಾಲು ಸಾಲು ಭಕ್ತರು ಬರುತ್ತಿದ್ದಾರೆ. ಬುಧವಾರ ಮುಂಜಾನೆಯಿಂದಲೇ ಸ್ನಾನಕ್ಕೆ ದೂರದೂರಿನಿಂದ ಬಂದ ಭಕ್ತರು ಆಗಮಿಸಿದ್ದರು. ದೇವಸ್ಥಾನ ಸಮಿತಿಯು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ.
ರಾಮೇಶ್ವರ ದೇವರ ಎಳ್ಳಾಮಾವಾಸ್ಯೆ ಜಾತ್ರೆ ಆರಂಭಗೊಂಡಿದ್ದು, ಪುರಾಣ ಪ್ರಸಿದ್ಧ ರಾಮ ಕೊಂಡದ ಬಳಿ ಬೆಳಿಗ್ಗೆಯಿಂದಲೇ ಜನ ಪುಣ್ಯ ಸ್ನಾನ ಮಾಡಿದರು. ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ತೀರ್ಥಹಳ್ಳಿ ತಾಲ್ಲೂಕು ಆಡಳಿತವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಿದ್ದು, ಜಾತ್ರೆ ಅಂಗಡಿಗಳಿಗೆ ಸ್ಥಳ ಅವಕಾಶ ನೀಡಿಲ್ಲ. ಇನ್ನೂ ಪ್ರತಿ ವರ್ಷದಂತೆ ಜಾತ್ರೆಯ ಅದ್ಧೂರಿ ಇಲ್ಲದೇ ಇದ್ದರೂ, ಜನರ ಸಂಖ್ಯೆಯಲ್ಲಿ ಕಡಿಮೆ ಏನಿಲ್ಲ. ಅಂಗಡಿ ವ್ಯಾಪಾರಿಗಳು ರಸ್ತೆಯುದ್ದಕ್ಕೂ ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.