ಶಿವಮೊಗ್ಗದಲ್ಲಿ ಭಾರೀ ಮಳೆಗೆ ಅಸ್ತವ್ಯಸ್ತವಾದ ಜನಜೀವನ
ಶಿವಮೊಗ್ಗ, ಏಪ್ರಿಲ್ 22: ಶಿವಮೊಗ್ಗ ನಗರದಲ್ಲಿ ನಿನ್ನೆ ಸಂಜೆ ಭಾರೀ ಮಳೆಯಾಗಿದ್ದು, ಗಾಳಿ, ಮಳೆಗೆ ಹಲವು ಕಡೆಗೆ ಮರಗಳು ಧರೆಗುರುಳಿವೆ. ವೀರಣ್ಣ ಲೇಔಟ್ ನಲ್ಲಿ ಭಾರಿ ಗಾಳಿಗೆ ತೆಂಗಿನ ಮರ ತುಂಡಾಗಿ ಉರುಳಿದೆ. ಮನೆಯೊಂದರ ಶೀಟ್ ಮತ್ತು ನಾಲ್ಕು ಬೈಕ್ ಗಳ ಮೇಲೆ ಮರ ಬಿದ್ದಿದ್ದು, ಬೈಕುಗಳು ಜಖಂ ಆಗಿವೆ.
ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಟ್ಯಾಂಕ್ ಮೊಹಲ್ಲಾದ ಐದನೇ ಕ್ರಾಸ್ ನಲ್ಲಿ ತೆಂಗಿನ ಮರ ತುಂಡಾಗಿ ಮನೆಯೊಂದರ ಮೇಲೆ ಬಿದ್ದಿದೆ. ಆ ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. ವಿನೋಬನಗರದ ದಾಮೋದರ ಕಾಲೋನಿಯ ಉದ್ಯಾನದಲ್ಲಿ ಮರವೊಂದು ಉರುಳಿದೆ.
ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ; ಸಿಡಿಲು ಬಡಿದು ಮೂವರ ಸಾವು
ಮಳೆಯಿಂದಾಗಿ ಚರಂಡಿಗಳು ತುಂಬಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಆಲ್ಕೊಳದ ನಂದಿನಿ ಬಡಾವಣೆಯ 6ನೇ ಕ್ರಾಸ್ ನಲ್ಲಿ ರಸ್ತೆಗೆ ಹೊಂದಿಕೊಂಡಿದ್ದ ಮರ ಬುಡಮೇಲಾಗಿದೆ. ಮನೆಯೊಂದರ ಮೇಲೆ ಇದು ಉರುಳಿಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಹಾನಿ ಆಗಿಲ್ಲ.
ಜನರೇ ಚರಂಡಿ ಸ್ವಚ್ಛಗೊಳಿಸಿದರು: ಭಾರಿ ನೀರು ಹರಿದಿದ್ದರಿಂದ ಚರಂಡಿಯ ತಡೆಗೋಡೆಯೇ ಕಿತ್ತು ಹೋಗಿದೆ. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ರಸ್ತೆ ಮೇಲೆ ನೀರು ಹರಿಯುತ್ತಿದೆ. ಮನೆಗಳಿಗೂ ನುಗ್ಗುತ್ತಿದೆ. ಹಾಗಾಗಿ ಸ್ಥಳೀಯರೇ ಚರಂಡಿಯನ್ನು ಸ್ವಚ್ಛ ಮಾಡಿ, ನೀರು ಹರಿಯಲು ಅನುವು ಮಾಡಿಕೊಟ್ಟರು. ಜೆಪಿ ನಗರದಲ್ಲೂ ಭಾರಿ ಮಳೆಗೆ ಚರಂಡಿಗಳು ತುಂಬಿದ್ದು, ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಹಲವೆಡೆ ಕರೆಂಟ್ ಕಟ್: ನಗರದ ವಿವಿಧೆಡೆ ಮರಗಳು ಉರುಳಿ, ಕರೆಂಟ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.