ಶಿವಮೊಗ್ಗ ಜಿಲ್ಲೆಗೆ ಹಳದಿ ಅಲರ್ಟ್; ಭದ್ರಾ ಡ್ಯಾಂ ಒಳಹರಿವು ಹೆಚ್ಚಳ
ಶಿವಮೊಗ್ಗ, ಆಗಸ್ಟ್ 8: ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಮವಾರ ರಾತ್ರಿಯು ಭಾರೀ ಮಳೆ ಸುರಿಯುವ ಸಂಭವವಿದೆ.
ಜಿಲ್ಲೆಯಾದ್ಯಂತ ಸೋಮವಾರ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಕೆಲವು ಹೊತ್ತು ಬಿಡುವು ನೀಡುತ್ತಿರುವ ಮಳೆ, ನಂತರ ಅಬ್ಬರಿಸುತ್ತಿದೆ.
ಕರ್ನಾಟಕದ ಪ್ರಮುಖ ಡ್ಯಾಂಗಳ ಒಳ, ಹೊರ ಹರಿವು ಅಧಿಕ
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಕರಾವಳಿ ಭಾಗದಲ್ಲಿ ವಾಡಿಕೆ ಮಳೆ 32 ಮಿ. ಮೀ. ಆದರೆ 48 ಮಿ. ಮೀ ಮಳೆಯಾಗಿದೆ. ಇನ್ನು, ಮಲೆನಾಡು ಭಾಗದಲ್ಲಿ ವಾಡಿಕೆ ಮಳೆ 17 ಮಿ. ಮೀ. ಆದರೆ 41 ಮಿ. ಮೀ. ಮಳೆಯಾಗಿದೆ.
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ ಸುರಿದಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 22 ಮಿ.ಮೀ. ಆದರೆ 37 ಮಿ.ಮೀ ಮಳೆ ಸುರಿದಿದೆ. ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹೊನ್ನೇತಾಳು ಗ್ರಾಮದಲ್ಲಿ 133 ಮಿ. ಮೀ. ಮಳೆ ಸುರಿದಿದೆ.
ಮಳೆಯ ಪ್ರಮಾಣ
ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ 72 ಮಿ. ಮೀ., ತೀರ್ಥಹಳ್ಳಿಯಲ್ಲಿ 67.4 ಮಿ. ಮೀ., ಸಾಗರದಲ್ಲಿ 63.6 ಮಿ. ಮೀ. ಮಳೆಯಾಗಿದೆ. ಇನ್ನು, ಭದ್ರಾವತಿಯಲ್ಲಿ 16.9 ಮಿ. ಮೀ., ಶಿಕಾರಿಪುರದಲ್ಲಿ 21.7 ಮಿ. ಮೀ., ಶಿವಮೊಗ್ಗದಲ್ಲಿ 21 ಮಿ. ಮೀ., ಸೊರಬದಲ್ಲಿ 40 ಮಿ. ಮೀ. ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇವತ್ತು ಮಧ್ಯಾಹ್ನ 1 ಗಂಟೆಯಿಂದ ಆಗಸ್ಟ್ 9ರ ಬೆಳಗ್ಗೆ 8.30ರವರೆಗೆ ಯಲ್ಲೋ ಅಲರ್ಟ್ ಇರಲಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ 64.5 ಮಿ. ಮೀ. ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ.
ಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು
ಕುದುರೆಮುಖ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಆದ್ದರಿಂದ ಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಭಾರೀ ಪ್ರಮಾಣದ ನೀರು ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ ಭದ್ರಾ ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ 55 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ಭದ್ರಾ ಜಲಾಶಯಕ್ಕೆ 40,194 ಕ್ಯೂಸೆಕ್ ಒಳ ಹರಿವು ಇತ್ತು. 41,386 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಸಂಜೆ ವೇಳೆಗೆ 55 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಹಾಗಾಗಿ 45 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತು. ಈಗ ಮತ್ತೆ ಒಳ ಹರಿವು ಏರಿಕೆಯಾಗಿದೆ.
ಮುಳುಗಡೆ ಭೀತಿ
ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವುದರಿಂದ ಭದ್ರಾವತಿಯಲ್ಲಿ ಮುಳುಗಡೆ ಭೀತಿ ಶುರುವಾಗಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಇದೆ ಪ್ರಮಾಣದಲ್ಲಿ ಮಳೆಯಾದರೆ ರಾತ್ರಿ ಭದ್ರಾ ಜಲಾಶಯದಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹೊಳೆಗೆ ಹರಿಸುವ ಸಾಧ್ಯತೆ ಇದೆ. ಮುಳುಗಡೆ ಭೀತಿ ಹಿನ್ನೆಲೆ ಭದ್ರಾವತಿಯ ತಗ್ಗು ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಪ್ರಸ್ತುತ ಜಿಲ್ಲಾಡಳಿತದ ವತಿಯಿಂದ ಒಂದು ಕಾಳಜಿ ಕೇಂದ್ರವನ್ನು ಮಾಡಲಾಗಿದೆ.
ಭತ್ತದ ಗದ್ದೆ ಜಲಾವೃತ
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಬಹುಪಾಲು ಕೆರೆಗಳು ತುಂಬಿ ಹರಿಯುತ್ತಿವೆ. ಆನವಟ್ಟಿಯ ಹೊಸಕೆರೆ ಕೋಡಿ ಒಡೆದಿದ್ದು, ಇದರಿಂದ ಬಂದ್ನಿಗಟ್ಟೆ ಗ್ರಾಮದ 600ಕ್ಕೂ ಹೆಚ್ಚು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. ಇದರಿಂದ ಭತ್ತದ ನಾಟಿಗೆ ಸಿದ್ಧತೆ ನಡೆಸಿದ್ದ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳು ತಕ್ಷಣವೇ ಕೆರೆ ಕೋಡಿ ಕಾಲುವೆ ದುರಸ್ತಿ ಮಾಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.