ಶಿವಮೊಗ್ಗದಲ್ಲಿ ಮುಂದುವರಿದ ಮಳೆ, ರಸ್ತೆ ಜಲಾವೃತ, ಬೆಳೆ, ಮನೆಗಳಿಗೆ ಹಾನಿ
ಶಿವಮೊಗ್ಗ, ಆಗಸ್ಟ್ 5: ಜಿಲ್ಲೆಯಾದ್ಯಂತ ನಿರಂತರ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ 22 ಮಿ.ಮೀ ವರ್ಷಧಾರೆಯಾಗಿದೆ. ಭಾರಿ ಮಳೆಗೆ ಹಲವು ಕಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.
24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ಇಲ್ಲಿ 33.6 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 30.3 ಮಿ.ಮೀ, ಸಾಗರದಲ್ಲಿ 27.6 ಮಿ.ಮೀ, ಭದ್ರಾವತಿಯಲ್ಲಿ 25.9 ಮಿ.ಮೀ, ಶಿವಮೊಗ್ಗದಲ್ಲಿ 15.8 ಮಿ.ಮೀ, ಶಿಕಾರಿಪುರದಲ್ಲಿ 8 ಮಿ.ಮೀ, ಸೊರಬದಲ್ಲಿ 1.6 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಕೆಲವು ಭಾಗದಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಇದರಿಂದ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಹಲವು ಕಡೆ ರಸ್ತೆಗಳು, ಮನೆಗಳು, ಅಂಗಡಿಗಳು ಜಲಾವೃತವಾಗಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.
ಹಾಸನ ಜಿಲ್ಲೆಯಲ್ಲಿ ಕುಸಿಯುವ ಹಂತದಲ್ಲಿರುವ 40 ಮನೆಗಳು: ಜನರಿಗೆ ಆತಂಕ
ದಕ್ಷಿಣ ಭಾರತದ ಚಿರಾಪೂಂಜಿ ಎಂದು ಖ್ಯಾತಿ ಪಡೆದಿರುವ ಆಗುಂಬೆಯಲ್ಲಿ ಭಾರಿ ವರ್ಷಧಾರೆ. ಕಳೆದ 24 ಗಂಟೆ ಜಿಲ್ಲೆಯಲ್ಲಿ ಆಗುಂಬೆ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಆಗುಂಬೆಯಲ್ಲಿ 124.50 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಆಗುಂಬೆ ಘಾಟಿಯ ಸೋಮೇಶ್ವರ ಭಾಗದಲ್ಲಿ ಮರ ಧರೆಗುರುಳಿದೆ. ಸೋಮೇಶ್ವರ ಭಾಗದಲ್ಲಿ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ.
ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ
ಗುರುವಾರದ ಮಳೆಗೆ ಮನೆ, ಅಂಗಡಿಗಳು ಜಲಾವೃತವಾಗಿದ್ದು, ಮಳೆ ನೀರನ್ನು ಹೊರಗೆ ಹಾಕುವ ಕಾರ್ಯ ನಡೆಯುತ್ತಿದೆ. ಶಿವಮೊಗ್ಗದ ಎನ್.ಟಿ.ರಸ್ತೆಯ ಹಲವು ಕಡೆ ಅಂಗಡಿಗಳಿಗೆ ನೀರು ನುಗ್ಗಿತ್ತು. ಇವತ್ತು ನೀರು ತೆಗೆದು ಹಾಕಿ, ಅಂಗಡಿಗಳ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ವೇಳೆ ಮಾತನಾಡಿದ ಅಂಗಡಿ ಮಾಲೀಕರು, ಮಳೆಯಿಂದ ದೊಡ್ಡ ನಷ್ಟವಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಲಿಕೆಯಿಂದ ಮುನ್ನೆಚ್ಚರಿಕೆ
ಜಿಲ್ಲೆಯಾದ್ಯಂತ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಆಗಸ್ಟ್ 6ರವರೆಗೆ ನಗರ ವ್ಯಾಪ್ತಿಯಲ್ಲಿ ಜೋರು ಮಳೆಯಾಗುವ ಸಾದ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆ ವಹಿಸಬೇಕು ಎಂದು ಮೈಕ್ ಮೂಲಕ ಅನೌನ್ಸ್ ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಪಾಲಿಕೆಯ ಹೆಲ್ಪ್ ಲೈನ್ ನಂಬರ್ ಸಂಪರ್ಕಿಸಬೇಕು ಎಂದು ಜನತೆಗೆ ಸೂಚಿಸಲಾಗುತ್ತಿದೆ.
45 ಮನೆಗಳಿಗೆ ಹಾನಿ
ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ 45 ಮನೆಗಳಿಗೆ ಹಾನಿ ಉಂಟಾಗಿದೆ. ಈ ಪೈಕಿ 38 ಮನೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. 3 ಮನೆಗಳು ಭಾಗಶಃ, 4 ಮನೆಗಳು ಸಂಪೂರ್ಣ ಹಾನಿ ಉಂಟಾಗಿದೆ. ಮನೆ ಹಾನಿ ಕುರಿತು ಮಾಹಿತಿ ಲಭ್ಯವಾದ ಕಡೆಗೆ ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಭತ್ತ, ಜೋಳದ ಬೆಳೆಗಳಿಗೆ ಹಾನಿ
ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಬೆಳೆ ಹಾನಿ ಕೂಡ ಸಂಭವಿಸಿದೆ. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಭತ್ತ ಮತ್ತು ಜೋಳದ ಬೆಳೆಗಳಿಗೆ ಹಾನಿಯಾಗಿದೆ. ಒಟ್ಟು 125 ಹೆಕ್ಟೇರ್ ಜಮೀನಿಗೆ ನೀರು ನುಗ್ಗಿದ್ದು, ಬೆಳೆ ಹಾನಿ ಉಂಟಾಗಿದೆ. ಮತ್ತೊಂದೆಡೆ ಮನೆಗಳಿಗೆ ನೀರು ನುಗ್ಗಿದ್ದು, 110 ಕುಟುಂಬಗಳು ಸಂಕಷ್ಟಕ್ಕಿಡಾಗಿವೆ. ಪ್ರಸ್ತುತ ಶಿಕಾರಿಪುರ ತಾಲೂಕಿನಲ್ಲಿ ಒಂದು ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. 16 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.