ಶಿವಮೊಗ್ಗ: ಭಾರೀ ಮಳೆಗೆ ತಾಳಗುಪ್ಪದಲ್ಲಿ ರೈಲ್ವೆ ಹಳಿ ಜಲಾವೃತ; ಎಲ್ಲೆಲ್ಲಿ ಎಷ್ಟು ಮಳೆ?
ಶಿವಮೊಗ್ಗ, ಜುಲೈ 23: ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲ್ವೆ ಹಳಿ ಮೇಲೆ ನೀರು ನಿಂತಿರುವುದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗುವ ಸಂಭವವಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರೈಲು ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ತಾಳಗುಪ್ಪದಿಂದ ರೈಲು ಸಂಚಾರ ಸ್ಥಗಿತಗೊಳ್ಳುವ ಸಂಭವ ಕೂಡ ಇದೆ.
ಭಾರೀ ಮಳೆಗೆ ಸಾಗರ ಪಟ್ಟಣದ ವಿವಿಧೆಡೆ ಜಲಾವೃತ; ಶಾಸಕರಿಂದ ಸಿಟಿ ರೌಂಡ್ಸ್
ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ಮಧ್ಯಾಹ್ನದ ರೈಲು ಸಾಗರದ ಜಂಬಗಾರು ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ. ರಾತ್ರಿ ವೇಳೆಗೆ ಹಳಿ ಮೇಲಿನ ನೀರು ತಗ್ಗದಿದ್ದರೆ ತಾಳಗುಪ್ಪದಿಂದ ರಾತ್ರಿ ರೈಲು ಸಂಚಾರಕ್ಕೆ ಅಡ್ಡಿ ಉಂಟಾಗುವ ಸಂಭವವಿದೆ.
ಹೊಸನಗರದಲ್ಲಿ ಬಿಡುವು ಕೊಡದ ಮಳೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ದಾಖಲೆ ಮಳೆಯಾಗುತ್ತಿದ್ದು, ಕ್ಷಣ ಹೊತ್ತು ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಲ್ಲಿ 210.2 ಮಿ.ಮೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ತಾಲೂಕಿನ ಹಳ್ಳ- ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ. ಹೊಳೆಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಇನ್ನು ಹೊಲ, ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಬೆಳೆ ಹಾನಿ ಭೀತಿ ಎದುರಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಹೊಸನಗರ ತಾಲೂಕಿನ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 192 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 196 ಮಿ.ಮೀ, ಹುಲಿಕಲ್ನಲ್ಲಿ 155 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 200 ಮಿ.ಮೀ, ಚಕ್ರಾದಲ್ಲಿ 196 ಮಿ.ಮೀ, ಸಾವೇಹಕ್ಕಲು ಡ್ಯಾಂ ಸುತ್ತಮುತ್ತ 225 ಮಿ.ಮೀ ಮಳೆಯಾಗಿದೆ.
ಮಾಣಿ ಡ್ಯಾಂಗೆ 9,253 ಕ್ಯುಸೆಕ್ ಒಳಹರಿವು ಇದೆ. ಪಿಕಪ್ ಡ್ಯಾಂನಲ್ಲಿ 2573 ಕ್ಯುಸೆಕ್ ಒಳಹರಿವು ಇದೆ. ಚಕ್ರಾ ಡ್ಯಾಂನಲ್ಲಿ 3816 ಕ್ಯುಸೆಕ್, ಸಾವೇಹಕ್ಕಲು ಡ್ಯಾಂಗೆ 2779 ಕ್ಯುಸೆಕ್ ಒಳಹರಿವು ದಾಖಲಾಗಿದೆ.