ಶಿವಮೊಗ್ಗದಲ್ಲಿ ಪೊಲೀಸ್, ವೈದ್ಯರು ಸೇರಿ ಅನೇಕರಿಗೆ ಕ್ವಾರಂಟೈನ್!
ಶಿವಮೊಗ್ಗ, ಮೇ 19: ಶಿವಮೊಗ್ಗ ಜಿಲ್ಲೆಯ ಕೆಲವು ಹಿರಿಯ ಪೊಲೀಸ್ ಇಲಾಖೆ ಅಧಿಕಾರಿಗಳು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಕ್ವಾರಂಟೈನ್ ಆಗಿದ್ದಾರೆ.
ಶಿಕಾರಿಪುರ ತಾಲೂಕಿನ ತರಲಘಟ್ಟ ಪ್ರಕರಣಕ್ಕೆ ಕೊರೊನಾ ನಂಟು ಅಂಟಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಿ ಸಂಸ್ಥೆಯನ್ನು ಕೆಲ ದಿನಗಳ ಕಾಲ ಮುಚ್ಚಲು ಸೂಚಿಸಿದ ಬೆನ್ನಲ್ಲೇ, ಆ ಪ್ರಕರಣದಲ್ಲಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 20 ಜನ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳ ಪಟ್ಟಿ ಈಗ ಕೊರೊನಾ ಸಮಿತಿ ಮುಂದೆ ಬಂದಿದೆ.
ಕೊರೊನಾ ಸಮಿತಿಯು ವಿಶ್ಲೇಷಣೆ ನಡೆಸಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ಸೂಚಿಸಿದ ನಂತರ, ಅವರುಗಳನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ; ತಾಯಿಯ ಕೊಳೆತ ಶವದೊಂದಿಗೆ ಐದು ದಿನ ಕಳೆದ ಮಗಳು
ಅದರಲ್ಲಿ ಸದ್ಯಕ್ಕೆ ಮೂವರಿಂದ ನಾಲ್ವರು ಪೊಲೀಸರನ್ನು ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಹಾಗೂ ಸಿಮ್ಸ್ ನ ವೈದ್ಯರನ್ನೊಳಗೊಂಡ ಕೊರೊನಾ ಸಮಿತಿಯಲ್ಲಿ, ಪಾಸಿಟಿವ್ ಬಂದ ವ್ಯಕ್ತಿಯ ಜೊತೆ ಯಾರು ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಣೆ ನಡೆಸಿ ಜಿಲ್ಲಾಡಳಿತದ ಗಮನಕ್ಕೆ ತರುತ್ತಾರೆ ಎಂದರು.
ಅವರನ್ನು ಕ್ವಾರಂಟೈನ್ ಮಾಡುವ ತೀರ್ಮಾನವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ನಾಳೆ ಯಾರು, ಯಾರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುತ್ತಾರೆ ಎಂಬ ಸ್ಪಷ್ಟ ಚಿತ್ರಣ ತಿಳಿದುಬರುತ್ತದೆ ಎಂದು ಡಿಸಿ ತಿಳಿಸಿದರು.