ಶಿವಮೊಗ್ಗದಲ್ಲಿ ಕೇಳಿಬಂದ ಪಂಚಿಂಗ್ ಡೈಲಾಗ್ ಗಳು
ಶಿವಮೊಗ್ಗ, ಏ.9: ಶಿವಮೊಗ್ಗ ಲೋಕಸಭೆ ಕ್ಷೇತ್ರ ಬುಧವಾರ (ಏ.9) ಹಲವಾರು ರಾಜಕೀಯ ದೊಂಬರಾಟಗಳಿಗೆ ಸಾಕ್ಷಿಯಾಯಿತು. ಒಂದು ಕಡೆ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರ ಹೇಳಿಕೆಗಳು ಜನಕ್ಕೆ ಪುಕ್ಕಟೆ ಮನರಂಜನೆ ನೀಡುತ್ತಿದ್ದರೆ, ಇನ್ನೊಂದು ಕಡೆ ಗೀತಾ ಶಿವರಾಜ್ ಕುಮಾರ್ ಪರ ಸಿನಿಮಾ ತಾರೆಗಳ ಡೈಲಾಗ್ ಮೇಲೆ ಡೈಲಾಗ್ ಗಳನ್ನು ಹೊಡೆದು ಇನ್ನಷ್ಟು ಚಪ್ಪಾಳೆ ಗಿಟ್ಟಿಸುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಜನರಿಗೆ ಕೈಮುಗಿಯುತ್ತಾ ಮತ ಕೇಳಿದರೆ, ಪತಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡ್ಕೊಂಡು ಮತ ಕೇಳ್ತಾರೆ. ಡ್ಯಾನ್ಸ್ ಮಾಡೋಕೆ ಸಂಸತ್ತು ಏನು ಸಿನಿಮಾ ಹಾಲ್ ಕೆಟ್ಟೋಯ್ತಾ ಎಂದು ಆಯನೂರು ಲೇವಡಿ ಮಾಡಿದ್ದರ ವಿರುದ್ಧ ಇಂದು (ಏ.9) ಲೂಸ್ ಮಾದ ಯೋಗೀಶ್ ತಿರುಗಿಬಿದ್ದರು. [ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಗೀತಾ ಶಿವಣ್ಣ ಸಂದರ್ಶನ]
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚಿಸುತ್ತಿದ್ದ ಅವರು, "ಖಂಡಿತವಾಗಿಯೂ ನಾವೆಲ್ಲರೂ ನಾಟಕದವರೇ, ಆದರೆ ಜನಕ್ಕೆ ಮೋಸ ಮಾಡಿಲ್ಲ. ಎಂಜಿಆರ್, ಎನ್ಟಿಆರ್, ಜಯಲಲಿತಾ ಎಲ್ಲರೂ ಬಣ್ಣದ ಹಿನ್ನೆಲೆಯಲ್ಲೇ ಬಂದವರು. ಜನಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಸಿನಿಮಾದವರು ಕೇವಲ ಮುಖಕ್ಕೆ ಬಣ್ಣ ಹಚ್ಚುತ್ತಾರೆ ಅಷ್ಟೇ, ಆದರೆ ರಾಜಕಾರಣಿಗಳು ನಾಲಿಗೆಗೂ ಬಣ್ಣ ಹಚ್ಚುತ್ತಾರೆ. ಇದಕ್ಕೆ ಆಯನೂರು ಮಂಜುನಾಥ್ ಸಹ ಹೊರತಲ್ಲ" ಎಂದರು.
ನಾವೆಲ್ಲಾ ಶಿವಣ್ಣನ ಮೂರನೇ ಕಣ್ಣು: ಲೂಸ್ ಮಾದ
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಚುನಾವಣಾ ಪ್ರಚಾರಕ್ಕೂ ಮುನ್ನಾ ಮಾತನಾಡಿದ ಅವರು, "ನಾವೆಲ್ಲಾ ಶಿವಣ್ಣನ ಮೂರನೇ ಕಣ್ಣು ಇದ್ದಂತೆ. ನಾವು ಯಾವುದೇ ಪಕ್ಷದ ಪರವಾಗಿ ಬಂದಿಲ್ಲ. ಶಿವಣ್ಣನ ಮೇಲಿನ ಅಭಿಮಾನಕ್ಕೆ ಬಂದಿದ್ದೆವೆ. ನಾನು ಶಿವಣ್ಣನ ಅಭಿಮಾನಿ" ಎಂದರು.
ಮುಖಕ್ಕೆ ಮಾತ್ರ ಬಣ್ಣ ನಾಲಿಗೆಗೆ ನಾವು ಹಾಕಲ್ಲ
"ನನಗೆ ಇಲ್ಲಿ ಓಟ್ ಮಾಡುವ ಅರ್ಹತೆ ಇದ್ದಿದ್ದರೆ, ಗೀತಾ ಶಿವರಾರ್ ಕುಮಾರ್ ಗೆ ಮತ ಹಾಕುತ್ತಿದ್ದೆ. ಶಿವಣ್ಣ ಆಗಲಿ ಅವರ ಕುಟುಂಬವಾಗಲಿ ಯಾರಿಗೂ ಮೋಸ ಮಾಡಿಲ್ಲ. ನಾವು ಮುಖಕ್ಕೆ ಬಣ್ಣ ಹಾಕುತ್ತೆವೆ ಆದ್ರೆ ಜನರಿಗೆ ಮೋಸ ಮಾಡಿಲ್ಲ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದ್ರು. ನಾನು ಮುಖಕ್ಕೆ ಬಣ್ಣ ಹಾಕುತ್ತವೆ ಆದ್ರೆ ನಾಲಿಗೆಗೆ ಅಲ್ಲ ಎಂದರು.
ನಾನು ಶಿವಣ್ಣನಿಗಾಗಿ ಬಂದಿದ್ದೇನೆ: ಅಮೂಲ್ಯ
ನಂತರ ಮಾತನಾಡಿದ ನಟಿ ಅಮೂಲ್ಯ, ಇವತ್ತು ನಾನು ಶಿವಣ್ಣನಿಗಾಗಿ ಬಂದಿದ್ದೇವೆ. ಗೀತಕ್ಕ ಒಬ್ಬ ಮಗಳಾಗಿ ಒಳ್ಳೆಯದು ಮಾಡಿದ್ದಾರೆ. ಶಿವಮೊಗ್ಗ ಅಭಿವೃದ್ಧಿಯಲ್ಲಿ ಗೀತಾ ಶಿವರಾಜ್ ತಂದೆರವರ ಕೊಡುಗೆ ಸಹ ಇದೆ. ಅವರ ತಂದೆಯ ಹೆಸರನ್ನು ಉಳಿಸುತ್ತಾರೆ ಎಂದರು. ಯೋಗಿ ಮತ್ತು ಅಮೂಲ್ಯಾ ಇಬ್ಬರು ಸಹ ಶಿವಮೊಗ್ಗ ನಗರದಲ್ಲಿ ಪ್ರಚಾರ ನಡೆಸಿ, ನಂತರ ಶಿವಣ್ಣನ ಜೊತೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಜೋಗಿ ಡೈಲಾಗ್ಸ್, ಡಾನ್ಸ್ ಇಲ್ಲಿ ನಡೆಯಲ್ಲ
ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡುತ್ತಾ, ಕಳೆದ ಬಾರಿ ಪೂಜಾಗಾಂಧಿ ಚುನಾವಣೆಗೆ ನಿಂತಿದ್ದಾಗ ಅವರ ಹಿಂದೆ ಸಾವಿರಾರು ಜನ ಓಡಾಡುತ್ತಿದ್ದರು. ಆದರೆ ಅವರೆಲ್ಲಾ ಪೂಜಾಗೆ ಓಟ್ ಹಾಕಲಿಲ್ಲ. ಠೇವಣಿ ಕಳೆದುಕೊಂಡದ್ದನ್ನು ನೋಡಿದ್ದೇವೆ. ಶಿವಮೊಗ್ಗದಲ್ಲಿ ನೇರವಾಗಿ ಫೈಟ್ ಇರೋದು ಕಾಂಗ್ರೆಸ್ ಮತ್ತು ಬಿಜೆಪಿಗೆ ಎಂದರು.
ಜೋಗಿ ಡೈಲಾಗ್, ಡಾನ್ಸ್ ನೋಡಲು ಬಂದವರು
ಈಗ ಶಿವರಾಜ್ ಕುಮಾರ್ ಹಿಂದೆಯೂ ಸಾಕಷ್ಟು ಜನ ಓಡಾಡುತ್ತಿದ್ದಾರೆ. ಅವರೆಲ್ಲಾ ಓಟ್ ಹಾಕುವವರಲ್ಲ. ಜೋಗಿ ಡೈಲಾಗ್, ಡಾನ್ಸ್ ನೋಡಲು ಬಂದವರು. ಬಂಗಾರಪ್ಪನವರು ಅನಾರೋಗ್ಯಕ್ಕೆ ಈಡಾಗಿದ್ದಾಗ ಈ ಶಿವರಾಜ್ ಕುಮಾರ್, ಗೀತಾ ಎಲ್ಲಿ ಹೋಗಿದ್ದರು. ಆಗ ಬಾರದ ಇವರು ಈಗ ಬಂಗಾರಪ್ಪ ಫೋಟೋ ಹಿಡಿದು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ ಕಿಮ್ಮನೆ.
ಯಡಿಯೂರಪ್ಪನೇ ಇಲ್ಲಿ ಸ್ಟಾರ್: ಶೋಭಾ
ಇನ್ನೊಂದು ಕಡೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡುತ್ತಾ, ಶಿವಮೊಗ್ಗ ಜಿಲ್ಲೆಗೆ ಯಾವ ಸ್ಟಾರ್ ಬೇಕಾಗಿಲ್ಲ. ನಮ್ಮ ಪಾಲಿಗೆ ಮೋದಿ ದೊಡ್ಡ ಸ್ಟಾರ್ ಅವರ ನಂತರ ಯಡಿಯೂರಪ್ಪ ಅವರೇ ಸ್ಟಾರ್ ಎಂದರು. ಒಟ್ಟಾರೆಯಾಗಿ ಬುಧವಾರ ಒಬ್ಬೊಬ್ಬರು ಒಂದೊಂದು ಡೈಲಾಗ್ ಹೊಡೆದು ಯಾವ ಸಿನಿಮಾಗೂ ಕಮ್ಮಿ ಇಲ್ಲದಂತೆ ಜನಕ್ಕೆ ಲೈವ್ ಮನರಂಜನೆ ನೀಡಿದರು.