ಶಿವಮೊಗ್ಗ; ರೈತರ ಪರಿಹಾರಕ್ಕೆ ಒತ್ತಾಯಿಸಿ ಮಾಜಿ ಸಚಿವರಿಂದ ಪಾದಯಾತ್ರೆ
ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗ ಜಿಲ್ಲೆಯ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುವುದನ್ನು ವಿರೋಧಿಸಿ ಆಗುಂಬೆಯಿಂದ ಮೇಗರವಳ್ಳಿಯವರೆಗೂ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದರು.
ತೀರ್ಥಹಳ್ಳಿ ಆಗುಂಬೆಯಿಂದ ಮೇಗರವಳ್ಳಿ ಅರಣ್ಯ ಇಲಾಖೆವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ಕಿಮ್ಮನೆ ರತ್ನಾಕರ್ ಅತಿವೃಷ್ಟಿಯಿಂದಾದ ನಷ್ಟ ಪರಿಹಾರ ವಿತರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
ಸಭೆಯಲ್ಲೇ ಖಾಲಿ ಕೊಡ ಹಿಡಿದು ಪ್ರತಿಭಟಿಸಿದ ಪಾಲಿಕೆ ಸದಸ್ಯ
ಅಡಿಕೆ ಕೊಳೆ ರೋಗ, ಕಾಡಾನೆ, ಕಾಡುಕೋಣ, ಮಂಗಗಳು ಸೇರಿದಂತೆ ಇತರೆ ಕಾಡುಪ್ರಾಣಿಗಳಿಂದ ಹಾನಿಯಾಗಿದ್ದ ನಷ್ಟ ಭರಿಸಿಕೊಡಲು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ಕಾಡು ಪ್ರಾಣಿಗಳಿಂದ ಅಗತ್ಯ ರಕ್ಷಣೆ ನೀಡದೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪ ಮಾಡಿದರು.
ಆಗುಂಬೆಯಿಂದ ಕೌರಿಹಕ್ಕಲು, ಹೊಸೂರು, ಗುಡ್ಡೇಕೇರಿ, ಬಿಳಚಿಕಟ್ಟೆ, ನಾಲೂರು ಕೊಳಗಿ, ಅರೆಕಲ್ಲು ಮಾರ್ಗವಾಗಿ ಮೇಗರವಳ್ಳಿ ಗ್ರಾಮದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಪ್ರತಿಭಟನೆಯ ಮೊದಲ ಹಂತವಾಗಿ ಪಾದಯಾತ್ರೆ ನಡೆಸುತ್ತಿರುವ ಕಿಮ್ಮನೆ ರತ್ನಾಕರ್ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೇಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.