ಏಪ್ರಿಲ್ 15ರಿಂದ ಶಿವಮೊಗ್ಗ ಜಿಲ್ಲಾದ್ಯಂತ ಜನಗಣತಿ ಸಮೀಕ್ಷೆ: ಕೆ.ಬಿ.ಶಿವಕುಮಾರ್
ಶಿವಮೊಗ್ಗ, ಮಾರ್ಚ್ 11: ಏಪ್ರಿಲ್ 15ರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮನೆಪಟ್ಟಿ, ಮನೆಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ ಕಾರ್ಯ ಆರಂಭಗೊಳ್ಳಲಿದ್ದು, ಮನೆಮನೆಗೆ ಭೇಟಿ ನೀಡಿ ಮಾಹಿತಿ ಕೇಳುವ ಅಧಿಕಾರಿಗಳಿಗೆ ಸಾರ್ವಜನಿಕರು ವಿವರ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಹಳೇ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾಡಳಿತ ಸಭಾಂಗಣದಲ್ಲಿ ಭಾರತದ ಜನಗಣತಿ-2021ಕ್ಕೆ ಸಂಬಂಧಿಸಿದಂತೆ ಕ್ಷೇತ್ರ ತರಬೇತುದಾರರಿಗಾಗಿ ಏರ್ಪಡಿಸಲಾಗಿದ್ದ 5ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಕೈಗೊಳ್ಳಲಾಗುತ್ತಿರುವ 8ನೇ ಜನಗಣತಿ ಇದಾಗಿದ್ದು ರಾಷ್ಟ್ರದ ಯೋಜನೆ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದವರು ನುಡಿದರು.
ಪ್ರಸ್ತುತ ಜನಗಣತಿಯಲ್ಲಿ ಮನೆಸ್ಥಿತಿ, ಸೌಲಭ್ಯಗಳು ಮತ್ತು ಸ್ವತ್ತುಗಳು, ಜನಸಂಖ್ಯಾಶಾಸ್ತ್ರ, ಧರ್ಮ, ಪರಿಶಿಷ್ಟ ಜಾತಿ/ಪಂಗಡ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಸಂತಾನೋತ್ಪತ್ತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಮಾಹಿತಿಯನ್ನು ಕಲೆಹಾಕಲಾಗುವುದು ಎಂದರು.
ಈ ಜನಗಣತಿಯು ಹಿಂದಿನ ಜನಗಣತಿಗಿಂತ ಭಿನ್ನವಾಗಿದ್ದು, ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಗಣತಿದಾರರು ತಮ್ಮ ಸ್ವಂತ ಮೊಬೈಲ್ ಫೋನ್ ಬಳಸಿ ಕುಟುಂಬಗಳಿಂದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಪ್ರೋತ್ಸಾಹಿಸಲಾಗಿದೆ. ಮೊದಲ ಹಂತವಾಗಿ ಮನೆಪಟ್ಟಿ ಮತ್ತು ಮನೆ ಸ್ವತ್ತುಗಳ ಗಣತಿಯಲ್ಲಿ ಮನೆಯ ಸ್ಥಿತಿ, ಕುಟುಂಬಗಳ ಸೌಲಭ್ಯಗಳು ಮತ್ತು ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಎಂದರು.
ಸಮೀಕ್ಷೆಗಾಗಿ ವಿನ್ಯಾಸಗೊಳಿಸಿರುವ ಈ ಆ್ಯಪ್ನ್ನು ತುಂಬಾ ಸರಳ, ಅನುಕೂಲಕರ ಮತ್ತು ಬಳಕೆದಾರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದಾಗಿ ಗಣತಿದಾರರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸಾರ್ವಕಾಲಿಕ ಎನ್.ಪಿ.ಆರ್. ಕಿರುಪುಸ್ತಕಗಳನ್ನು ಸಾಗಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ಮಹತ್ವದ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಹಂತದ ಕ್ಷೇತ್ರ ಕಾರ್ಯಕರ್ತರು, ಗಣತಿದಾರರು ನಿಷ್ಟೆ ಮತ್ತು ಬದ್ದತೆಯಿಂದ ಜವಾಬ್ದಾರಿಯರಿತು ಪ್ರಾಮಾಣಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಸಮೀಕ್ಷೆ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ಧಯುತವಾಗಿ ವ್ಯವಹರಿಸುವಂತೆ ಹಾಗೂ ಎದುರಾಗಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ವಿಷಯವನ್ನು ಅರಿತಿರುವಂತೆ ಅವರು ಸೂಚಿಸಿದರು.