ಶಿವಮೊಗ್ಗ; ಕೋವಿಡ್ ಕೇರ್ ಸೆಂಟರ್ನಲ್ಲಿ ನರಕದ ಅನುಭವ
ಶಿವಮೊಗ್ಗ, ಜೂನ್ 04; ಕೋವಿಡ್ ಸೋಂಕಿನ ಗುಣ ಲಕ್ಷಣವಿಲ್ಲದಿದ್ದರೂ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಸೇರಬೇಕು ಎಂದು ಶಿವಮೊಗ್ಗ ಜಿಲ್ಲಾಡಳಿತ ಕಟ್ಟಪ್ಪಣೆ ಹೊರಡಿಸಿದೆ. ಆದರೆ ಕೇರ್ ಸೆಂಟರ್ಗೆ ಬಂದವರು ಮಾತ್ರ ನರಕ ಯಾತನೆ ಅನುಭವಿಸುವಂತಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಸೋಂಕಿತರು ವಿವರಿಸಿದ್ದಾರೆ.
ಸೋಂಕು ಹರಡುವುದನ್ನು ತಡೆಯಲು, ಮನೆ ಮಂದಿಯಲ್ಲ ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳಲು ಕೊರೊನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಲಾಗುತ್ತಿದೆ. ಆದರೆ ಈ ಕೇರ್ ಸೆಂಟರ್ಗಳತ್ತ ಅಧಿಕಾರಿಗಳು ಮುಖ ಮಾಡುತ್ತಿಲ್ಲ.
ಶಿವಮೊಗ್ಗ; ಮದ್ಯದಂಗಡಿ ಬಂದ್, ಕಳ್ಳಭಟ್ಟಿಗೆ ಮತ್ತೆ ಬೇಡಿಕೆ!
ಇದು ಮಲ್ಲಿಗೇನಹಳ್ಳಿಯಲ್ಲಿ ಇರುವ ಕೋವಿಡ್ ಕೇರ್ ಸೆಂಟರ್. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಡಾ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ನಲ್ಲಿ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು 200 ಸೋಂಕಿತರಿದ್ದಾರೆ. ಇವರೆಲ್ಲ ಸೋಂಕಿನ ಗುಣ ಲಕ್ಷಣವಿಲ್ಲದವರು. ಆದರೂ ಪಾಸಿಟಿವ್ ಬಂದ ಹಿನ್ನಲೆ ಕ್ವಾರಂಟೈನ್ ಮಾಡಲಾಗಿದೆ.
ಶಿವಮೊಗ್ಗ: ವಾಕಿಂಗ್ ಮಾಡುತ್ತಿದ್ದವರಿಗೆ ವ್ಯಾಯಾಮ ಮಾಡಿಸಿದ ಪೊಲೀಸರು
ಅವ್ಯವಸ್ಥೆಗಳ ಆಗರ; ಕೇರ್ ಸೆಂಟರ್ನ ಮುಂದೆ ರಾಶಿ-ರಾಶಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಒಳಗಿರುವವರು ಊಟ, ತಿಂಡಿಯಲ್ಲಿ ಅಳಿದುಳಿದ್ದದ್ದನ್ನು ಬಿಸಾಡಿದ್ದೆಲ್ಲವು ಈ ಕಸದ ರಾಶಿಯಲ್ಲಿರುತ್ತದೆ. ಅಕ್ಕಪಕ್ಕದಿಂದ ಬರುವ ನಾಯಿಗಳು, ದನಕರುಗಳು ಇದನ್ನು ತಿನ್ನುತ್ತಿವೆ ಅಂತಾ ಆರೋಪಿಸುತ್ತಾರೆ ಇಲ್ಲಿರುವವರು. ಇನ್ನು, ಕೇರ್ ಸೆಂಟರ್ ಒಳಗಿರುವ ಕಸದ ಬುಟ್ಟಿ ಆಗಿಂದಾಗ್ಗೆ ಖಾಲಿ ಮಾಡತ್ತಿಲ್ಲ. 3-4 ದಿನ ಹಾಗೆ ಇರುತ್ತದೆ.
ಶುಚಿತ್ವದ ವಿಚಾರ; ಒಳಗೆ ಬಿಡುಗಾಸಿನಷ್ಟೂ ಶುಚಿತ್ವ ಇಲ್ಲ ಎಂದು ಇಲ್ಲಿರುವವರು ಆರೋಪಿಸುತ್ತಾರೆ. ಶೌಚಾಲಯವನ್ನು ಕ್ಲೀನ್ ಮಾಡಿದ್ದನ್ನು ಇಲ್ಯಾರು ಕಂಡಿಲ್ಲವಂತೆ. ಇನ್ನು, ಕೊಠಡಿಗಳ ಕ್ಲೀನಿಂಗ್ ವಿಚಾರ ದೂರದ ಮಾತು. ಅಲ್ಲಿದ್ದರವರೆ ಕ್ಲೀನ್ ಮಾಡಿ ಮಲಗುತ್ತಿದ್ದಾರೆ. ಬೆಡ್ ಶೀಟ್ಗಳನ್ನು ಒಗೆದಿದ್ದು ಯಾವಾಗ? ಅನ್ನುವುದು ಗೊತ್ತಿಲ್ಲ. ನಾವೇ ಒಗೆದುಕೊಳ್ಳುತ್ತೇವೆ ಅಂದರೂ ವ್ಯವಸ್ಥೆ ಇಲ್ಲ ಅನ್ನುತ್ತಾರೆ.
ಒಂದೇ ರೀತಿಯ ಊಟ, ತಿಂಡಿ; ಕೋವಿಡ್ ಸೋಂಕಿತರಿಗೆ ಪೌಷ್ಠಿಕ ಆಹಾರ ಬೇಕು. ಆದರೆ ಇಲ್ಲಿಯ ಕೋವಿಡ್ ಕೇರ್ ಸೆಂಟರ್ನಲ್ಲಿ ಪ್ರತಿದಿನ ಒಂದೇ ಬಗೆಯ ಊಟ, ಒಂದೇ ರೀತಿಯ ಸಾಂಬಾರು, ಪಲ್ಯ. ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಅನ್ನುತ್ತಾರೆ ಒಳಗಿರುವವರು. ಮನೆಗೆ ಕಳುಹಿಸಿದರೆ ನಾವೇ ಪೌಷ್ಠಿಕಾಂಶಯುಕ್ತ ಆಹಾರ ತಯಾರಿಸಿಕೊಳ್ಳುತ್ತೇವೆ ಅನ್ನುತ್ತಾರೆ ಇಲ್ಲಿರುವ ಮಹಿಳೆಯರು.
ಶಿವಮೊಗ್ಗ; ಹಳ್ಳಿಗಳಿಗೆ ಕೊರೊನಾ, ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ
ಡಾಕ್ಟರ್ ಓಕೆ, ಉಳಿದವರದ್ದೆ ಕಿರಿಕ್ಕು; ಇನ್ನು, ಇಲ್ಲಿ ವೈದ್ಯಕೀಯ ವ್ಯವಸ್ಥೆ ಚನ್ನಾಗಿದೆ. ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದು ಕೇರ್ ಸೆಂಟರ್ನಲ್ಲಿರುವವರ ಅಭಿಪ್ರಾಯ. ಆದರೆ ಉಳಿದ ಸಿಬ್ಬಂದಿಗಳು ಸೋಂಕಿತರನ್ನು ಬೆದರಿಸುತ್ತಿದ್ದಾರೆ. ಏನನ್ನಾದರೂ ವಿಚಾರಿಸಿದರೆ ಗದರುತ್ತಾರೆ.
ಜಿಲ್ಲಾಡಳಿತ ಈ ಕೇರ್ ಸೆಂಟರ್ಗಳಿಗೆ ಮೇಜರ್ ಸರ್ಜರಿ ಮಾಡಬೇಕಿದೆ. ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ. ಇಲ್ಲವಾದಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೂ ಜನರು ಭೀತಿಯಿಂದ ಟೆಸ್ಟ್ ಮಾಡಿಸಿಕೊಳ್ಳದೇ, ಮನೆಗಳಲ್ಲಿಯೇ ಉಳಿದುಕೊಂಡು ಅನಾಹುತ ಸೃಷ್ಟಿಸುವ ಸಾದ್ಯತೆ ಇದೆ.