ಕೋಟ್ಯಾಧಿಪತಿಯಲ್ಲಿ 12 ಲಕ್ಷ ಗೆದ್ದ ಶಿವಮೊಗ್ಗದ ಹೆಡ್ ಕಾನ್ಸ್ಟೇಬಲ್
ಶಿವಮೊಗ್ಗ, ಆಗಸ್ಟ್ 27 : ಕನ್ನಡ ಕಿರುತರೆ ಲೋಕದ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿಯಲ್ಲಿ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರು 12 ಲಕ್ಷ ಗೆದ್ದಿದ್ದಾರೆ. ಪೊಲೀಸ್ ಅಧೀಕ್ಷಕರು ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಪೇದೆ ಟಿ. ಗೋವರ್ಧನ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ 12.5 ಲಕ್ಷವನ್ನು ಗೆದ್ದಿದ್ದಾರೆ. ಕನ್ನಡದ ಕೋಟ್ಯಾಧಿಪತಿ 19 ಮತ್ತು 20ನೇ ಸಂಚಿಕೆಯಲ್ಲಿ ಟಿ.ಗೋವರ್ಧನ್ ಭಾಗವಹಿಸಿದ್ದರು.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಹೆಡ್ ಕಾನ್ಸ್ಟೇಬಲ್ ಗೋವರ್ಧನ್, "ನನ್ನದೊಂದು ಗುರಿ ಇತ್ತು. ಅದನ್ನು ಸಾಕಾರಗೊಳಿಸಿಕೊಳ್ಳಲು ಸಹಾಯಕವಾಯಿತು" ಎಂದು ಹೇಳಿದರು.
"ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರ ಆರಂಭವಾದಾಗಿನಿಂದ ಅದಲ್ಲಿ ಭಾಗವಹಿಸಬೇಕು ಎಂದು ಪ್ರಯತ್ನ ನಡೆಸುತ್ತಿದ್ದೆ. 2011ರಲ್ಲಿ ದಾವಣಗೆರೆಯಲ್ಲಿ ನಡೆದ ಆಡಿಷನ್ನಲ್ಲಿ ಪಾಲ್ಗೊಂಡಿದ್ದೆ. ಆದರೆ, ಮುಂದಿನ ಹಂತಕ್ಕೆ ಹೋಗುವ ಅವಕಾಶ ಸಿಕ್ಕಿರಲಿಲ್ಲ" ಎಂದು ಹೇಳಿದರು.
"ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಯತ್ನವನ್ನು ಮುಂದುವರೆಸಿದ್ದೆ. ಈ ಬಾರಿ ಪ್ರಯತ್ನಕ್ಕೆ ಫಲ ಸಿಕ್ಕಿದೆ. ನನ್ನ ಹಿರಿಯ ಅಧಿಕಾರಿಗಳು ಇದಕ್ಕೆ ತುಂಬಾ ಪ್ರೋತ್ಸಾಹ ನೀಡಿದರು" ಎಂದು ಸಂತಸ ಹಂಚಿಕೊಂಡರು.
ಟಿ. ಗೋವರ್ಧನ್ ಸಾಧನೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ಪೊಲೀಸರ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕನ್ನಡ ಕಿರುತರೆ ಲೋಕದ ಜನಪ್ರಿಯ ಕಾರ್ಯಕ್ರಮವಾಗಿದೆ. ನಟ ಪುನೀತ್ ರಾಜ್ಕುಮಾರ್ ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ.