ಶಿವಮೊಗ್ಗದಲ್ಲಿ ರೌಡಿಶೀಟರ್ ದೀಪು ಕಾಲಿಗೆ ಪೊಲೀಸ್ ಗುಂಡೇಟು
ಶಿವಮೊಗ್ಗ, ಫೆಬ್ರವರಿ.19: ವ್ಯಾಪಾರಿಯೊಬ್ಬರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ದೀಪು ಅಲಿಯಾಸ್ ಡಿಂಗನ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ನಡೆದಿದೆ. ಪೊಲೀಸರ ಫೈರಿಂಗ್ ನಲ್ಲಿ ಗಾಯಗೊಂಡಿರುವ ರೌಡಿಶೀಟರ್ ನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದ ಅನುಪಿನಕಟ್ಟೆ ಬಳಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತುಂಗಾ ನಗರ ಠಾಣೆ ಇನ್ಸ್ ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿ ಆತನನ್ನು ಬಂಧಿಸಲು ತೆರಳಿದ್ದರು. ಹೆಡ್ ಕಾನ್ಸ್ ಟೇಬಲ್ ಅರುಣ್ ಕುಮಾರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಜಗ್ಗದಿದ್ದಾಗ ಅನಿವಾರ್ಯವಾಗಿ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಮರದ ಕೆಳಗೆ ಹೋಗುವ ಬೈಕ್ ಗಳೆಲ್ಲ ಜಾರಿ ಬೀಳ್ತಿವೆ
ರೌಡಿ ಶೀಟರ್ ದೀಪು ನಡೆಸಿದ ಹಲ್ಲೆಯಿಂದ ಗಾಯಗೊಂಡ ಹೆಡ್ ಕಾನ್ಸ್ ಟೇಬಲ್ ಅರುಣ್ ಕುಮಾರ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಕಾಂತರಾಜು ಮತ್ತು ಡಿವೈಎಸ್ಪಿ ಪ್ರಶಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು.
ವ್ಯಾಪಾರಿಗೆ ಹಣಕ್ಕಾಗಿ ಬೆದರಿಕೆ:
ಶಿವಮೊಗ್ಗದ ಟಿಪ್ಪು ನಗರದಲ್ಲಿರುವ ವ್ಯಾಪಾರಿಗೆ ಕುಖ್ಯಾತ ರೌಡಿ ಬಚ್ಚನ್ ಹಣಕ್ಕಾಗಿ ಬೇಡಿಕೆಯಿಟ್ಟದ್ದನು ಎಂಬ ಆರೋಪವಿದೆ. ವ್ಯಾಪಾರಿಯು ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಆತನ ಗ್ಯಾಂಗ್ ನಲ್ಲಿದ್ದ ರೌಡಿಶೀಟರ್ ದೀಪು ಮತ್ತು ಆತನ ಸಹಚರರು ವ್ಯಾಪಾಮಿ ಮನೆ ಮೇಲೆ ದಾಳಿ ನಡೆಸಿದ್ದರು. ವ್ಯಾಪಾರಿ ಸಹೋದರರ ಮೇಲೆ ಹಲ್ಲೆ ನಡೆಸಿದ್ದು, ಜೀವ ಬೆದರಿಕೆಯೊಡ್ಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವ್ಯಾಪಾರಿಯು ತುಂಗಾ ನಗರ ಠಾಣೆಗೆ ದೂರು ನೀಡಿದ್ದರು.
ಎರಡು ಪ್ರಕರಣಗಳಲ್ಲಿ ಬೇಕಾದ ಆರೋಪಿ ದೀಪು:
ರೌಡಿಶೀಟರ್ ದೀಪು ಈ ಹಿಂದೆ ರೌಡಿಶೀಟರ್ ಆಗಿದ್ದ ಲೋಕಿ ಜೊತೆಗೆ ಗುರುತಿಸಿಕೊಂಡದ್ದನು. ಮೆಂಟಲ್ ಸೀನ ಮತ್ತು ಮೋಟಿ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ದೀಪು ಆರೋಪಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.