ಕುಪ್ಪಳ್ಳಿಯ ಕುವೆಂಪು ವಸ್ತು ಸಂಗ್ರಹಾಲಯದಲ್ಲಿ ಕಳವಿಗೆ ಯತ್ನಿಸಿದವನ ಬಂಧನ
ಶಿವಮೊಗ್ಗ, ಆಗಸ್ಟ್ 01: ಇತ್ತೀಚೆಗೆ ಹಳೆ ರೇಡಿಯೊ, ಟಿ.ವಿಗಳಿಗೆ ಹೆಚ್ಚಿನ ಬೆಲೆ ದೊರೆಯುತ್ತದೆ ಎಂಬ ಸುಳ್ಳು ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಹಳೆ ರೇಡಿಯೊ, ಟಿ.ವಿಗಳಿಗಾಗಿ ಹುಡುಕುವವರು ಹೆಚ್ಚಾಗುತ್ತಿದ್ದಾರೆ.
ಆ ಕಾರಣಕ್ಕಾಗಿಯೇ ಉಡುಪಿ ಮೂಲದ ಕಳ್ಳನೊಬ್ಬ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಕುವೆಂಪು ವಸ್ತು ಸಂಗ್ರಹಾಲಯಕ್ಕೆ ಕನ್ನ ಹಾಕಲು ಮುಂದಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ಜುಲೈ 31ರಂದು ಗಡಿಕಲ್ ಬಳಿಯ ವಸ್ತು ಸಂಗ್ರಹಾಲಯಕ್ಕೆ ನುಗ್ಗಿದ ಕಳ್ಳ, ಕಳ್ಳತನಕ್ಕೆ ಮುಂದಾಗಿದ್ದಾನೆ. ಈ ಸಮಯ ಗ್ರಾಮಸ್ಥರು ಈತನನ್ನು ಗಮನಿಸಿದ್ದನ್ನು ಕಂಡು ಪರಾರಿಯಾಗಿದ್ದಾನೆ.
ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಹಿಂದಿನ ರಹಸ್ಯ ಬಯಲು!
ಆದರೆ ನಂತರ ಗಮನಿಸಿದಾಗ ವಸ್ತು ಸಂಗ್ರಹಾಲಯದ ಬೀಗ ಮುರಿದಿರುವುದು ಕಂಡುಬಂದು, ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ತದನಂತರ ಸಂಜೆ ಮತ್ತೆ ಗ್ರಾಮದಲ್ಲಿ ಕಳ್ಳತನಕ್ಕೆ ಆತ ಯತ್ನಿಸುತ್ತಿರುವಾಗಲೇ ಖುದ್ದು ಗ್ರಾಮಸ್ಥರು ಹಿಡಿದು ಆತನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಸ್ತು ಸಂಗ್ರಹಾಲಯದಲ್ಲಿದ್ದ ರೇಡಿಯೋ ಕದಿಯಲು ಬಂದಿದ್ದ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.