ಗಾಂಜಾ, ಮಾದಕ ವಸ್ತುಗಳಿಗೆ ಬ್ರೇಕ್ ಹಾಕಲು ಶಿವಮೊಗ್ಗದಲ್ಲಿ ಪಿಸಿಒ ಸ್ಥಾಪನೆಗೆ ಪ್ಲಾನ್
ಶಿವಮೊಗ್ಗ, ಏಪ್ರಿಲ್ 10: ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಗೆ ಬ್ರೇಕ್ ಹಾಕಲು ಶಿವಮೊಗ್ಗ ಜಿಲ್ಲಾ ಪೊಲೀಸರು ವಿಭಿನ್ನ ಪ್ಲಾನ್ ಮಾಡಿದ್ದಾರೆ. ಪೊಲೀಸ್ ಇಲಾಖೆ ವತಿಯಿಂದ ಕೋ-ಆರ್ಡಿನೇಷನ್ ಆಫೀಸರ್ (ಪಿಸಿಒ) ನೇಮಿಸಲು ಚಿಂತಿಸಲಾಗಿದೆ.
ವಿವಿಧ ಕಾಲೇಜಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಸಿಬ್ಬಂದಿಗಳು ಅಥವಾ ವಿದ್ಯಾರ್ಥಿಗಳನ್ನು ಪಿಸಿಒ ಆಗಿ ಆಯ್ಕೆ ಮಾಡಲಾಗುತ್ತದೆ. ಕಾಲೇಜು ಕ್ಯಾಂಪಸ್ ನಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡು ಬಂದಲ್ಲಿ, ಈ ಪಿಸಿಒಗಳು ಪೊಲೀಸರ ಗಮನಕ್ಕೆ ತಂದರೆ ಸಾಕು, ಉಳಿದಂತೆ ಖಾಕಿ ಪಡೆ ಮುಂದಿನ ಕ್ರಮ ಕೈಗೊಳ್ಳಲಿದೆ.
ಕೊರೊನಾ 2ನೇ ಅಲೆಗೆ ಶಿವಮೊಗ್ಗದಲ್ಲಿ ಮೊದಲ ಬಲಿ; ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ
ಕಾಲೇಜಿನಲ್ಲಿ ಗಾಂಜಾ ಬೇರು ಕಟ್
ಕಾಲೇಜು ಹಂತದಲ್ಲಿ ಪಸರಿಸುತ್ತಿರುವ ಗಾಂಜಾ ಬೇರು ಕಡಿತಕ್ಕೆ ಪೊಲೀಸ್ ಇಲಾಖೆ ಈ ಯೋಜನೆಗೆ ಮುಂದಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲೆ ಪೊಲೀಸರೇ ಗಮನ ಇಡುವುದು ಕಷ್ಟ. ಹೀಗಾಗಿ, ಪಿಸಿಒ ಮೂಲಕ ಗಾಂಜಾ ಮಾರಾಟಗಾರರ ಮೇಲೆ ನಿಗಾ ಇಡಬಹುದಾಗಿದೆ ಎನ್ನುವುದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ಅಭಿಮತ.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲ್ಲ. ಕಾಲೇಜು ಪುನರಾರಂಭ ಬಳಿಕ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಗಾಂಜಾ ಅಮಲಿನಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲಾಗುತ್ತಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರ ಮೇಲಿನ ಹಲ್ಲೆ ಪ್ರಕರಣಗಳು ಇದಕ್ಕೆ ಉದಹಾರಣೆ. ಇದಕ್ಕೆ ಮೂಗುದಾರ ಹಾಕಲು ಪೊಲೀಸ್ ಇಲಾಖೆ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಮುಂದಾಗಲಿದೆ.
20 ತಿಂಗಳಲ್ಲಿ 128 ಕೇಸ್
ಕಳೆದ 20 ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 128ಕ್ಕೂ ಅಧಿಕ ಗಾಂಜಾ ಸಾಗಣೆ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. 284 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 386 ಕೆಜಿ ಹಸಿ ಮತ್ತು ಒಣ ಗಾಂಜಾ ಜಪ್ತಿ ಮಾಡಲಾಗಿದೆ.
2019ರ ಆಗಸ್ಟ್ 3ರಿಂದ ಡಿಸೆಂಬರ್ 31ರವರೆಗೆ 28 ಪ್ರಕರಣ ದಾಖಲಿಸಿ 56 ಆರೋಪಿಗಳನ್ನು ಬಂಧಿಸಲಾಗಿದೆ. 14 ಕೆಜಿ ಒಣ ಗಾಂಜಾ, 138 ಕೆಜಿ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
2020ರಲ್ಲಿ 89 ಪ್ರಕರಣಗಳನ್ನು ದಾಖಲಿಸಿ, ಒಟ್ಟು 203 ಆರೋಪಿಗಳನ್ನು ಬಂಧಿಸಲಾಗಿದೆ. 41 ಕೆಜಿ ಒಣ, 186 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
2021ರ ಜನವರಿಯಿಂದ ಮಾರ್ಚ್ 31ರವರೆಗೆ 11 ಪ್ರಕರಣಗಳನ್ನು ದಾಖಲಿಸಿ, ಒಟ್ಟು 25 ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ 7 ಕೆಜಿ ಒಣ ಗಾಂಜಾ ಜಪ್ತಿ ಮಾಡಲಾಗಿದೆ.