ಶಿವಮೊಗ್ಗ; ಬೈಕ್ ಓಡಿಸುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಿವಮೊಗ್ಗ, ನವೆಂಬರ್ 12: ಬೈಕ್ ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ಗುರುವಾರ ನಡೆದಿದೆ.
ಬೈಕ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ಹೃದಯಾಘಾತ ಆಗುತ್ತಿದ್ದಂತೆ ಅವರು ರಸ್ತೆ ಮಧ್ಯೆಯೇ ಬೈಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸುನೀಲ್ (38) ಮೃತಪಟ್ಟ ವ್ಯಕ್ತಿ. ಸುನೀಲ್ ಭದ್ರಾವತಿ ತಾಲೂಕು ಸಿದ್ಲಿಪುರದ ನಿವಾಸಿಯಾಗಿದ್ದು, ಮಾಚೇನಹಳ್ಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಒಂದೇ ದಿನ ಸಾವಿನ ಮನೆಯ ಕದ ತಟ್ಟಿದ ತಂದೆ ಮಗ; ಮಾಗಡಿಯಲ್ಲಿ ದಾರುಣ ಘಟನೆ
ಗುರುವಾರ, ಶಿವಮೊಗ್ಗ-ಭದ್ರಾವತಿ ಮಾರ್ಗ ಮಧ್ಯೆ ಬೈಕ್ ನಲ್ಲಿ ಬರುವಾಗ ಇವರಿಗೆ ಹೃದಯಾಘಾತ ಸಂಭವಿಸಿದೆ. ಆ ಕ್ಷಣವೇ ರಸ್ತೆ ಮೇಲೆ ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ನೆರವಿಗೆ ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಸುನೀಲ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಕೋಟೆ ಸಿಪಿಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತುಂಗಾ ನಗರ ಪೊಲೀಸರು ಈ ಘಟನೆಯನ್ನು ಅಪಘಾತ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ.