ಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶ
ಶಿವಮೊಗ್ಗ, ಆಗಸ್ಟ್ 26: ಶಿಕಾರಿಪುರ ತಾಲೂಕಿನ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಸಾಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಬಿಜೆಪಿ ಸರ್ಕಾರ ಈಗ ಮತ್ತೆ ಈ ಯೋಜನೆಗೆ 121 ಕೋಟಿ ಹಣ ಬಿಡುಗಡೆ ಮಾಡಿ ಯೋಜನೆ ಕೈಗೆತ್ತಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನ ಹಿಂದೆ ಮೊನ್ನೆ ಕಲ್ಲೊಡ್ಡು ಗ್ರಾಮ ನಿವಾಸಿಗಳ ಸಮಿತಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ, ಇದರ ವಿರುದ್ಧ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿತು.
ಬಿಎಸ್ವೈ ಸಂಪುಟದಲ್ಲಿ, ಒಬ್ಬರು ಮಾಜಿ ಸಿಎಂ, ಇಬ್ಬರು ಮಾಜಿ ಡಿಸಿಎಂ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, "2008ರಲ್ಲಿ ಶಿಕಾರಿಪುರಕ್ಕೆ ನೀರು ಒದಗಿಸುವ ಯೋಜನೆಗೆ ಅಂದು ಬಿಜೆಪಿ ಸರ್ಕಾರವಿದ್ದಾಗಲೇ 20 ಕೋಟಿ ಹಣ ಬಿಡುಗಡೆಯಾಗಿತ್ತು. ಆಗ ಸಾಗರದಲ್ಲಿ ಈ ಯೋಜನೆ ವಿರುದ್ಧ ಕೂಗು ಕೇಳಿಬಂದಿತ್ತು. ಇದಾದ ಮೇಲೆ 2013ರಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು. ನಂತರ ಬಂದಿದ್ದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ. ಈ ಸರ್ಕಾರವೂ ಕಲ್ಲೊಡ್ಡು ಯೋಜನೆಗೆ ಮಾನ್ಯತೆ ನೀಡಿರಲಿಲ್ಲ. ಆಗ ಶಿಕಾರಿಪುರಕ್ಕೆ ನೀಡಿದ್ದ ನೀರಾವರಿ ಯೋಜನೆಯಲ್ಲಿ ಕಲ್ಲೊಡ್ಡು ಯೋಜನೆ ಕೈಗೆತ್ತಿಕೊಳ್ಳಲಿದೆಯಾ ಎಂಬ ಸಂಶಯ ಮೂಡಿತ್ತು. ಆಗ ಸರ್ಕಾರ ಕಲ್ಲೊಡ್ಡು ಯೋಜನೆ ಕೈಗೆತ್ತಿಕೊಂಡರೆ ರಕ್ತಪಾತವಾಗಲಿದೆ ಎಂದು ಹೇಳಿದೆ. ಈಗಲೂ ಆ ಮಾತಿಗೇ ನಾನು ಬದ್ಧ" ಎಂದರು.
"ಸಿಎಂ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರ ಶಿಕಾರಿಪುರಕ್ಕೆ ಎಲ್ಲಾ ಅನುಕೂಲ ಮಾಡಿಕೊಡುತ್ತಿದ್ದಾರೆ. ಸಾಗರ ಜನತೆಗೆ ಮಹಾ ಮೋಸವನ್ನು ಮಾಡುತ್ತಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ. ಇದಕ್ಕಾಗಿ ಮತ್ತೊಂದು ಹೋರಾಟಕ್ಕೆ ಸಿದ್ಧ" ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿ.ಎಸ್ ವೈ ವಿರುದ್ಧ ಕಿಡಿಕಾರಿದರು. ಈ ಯೋಜನೆಯಿಂದ ಸಾಗರ ತಾಲೂಕಿನ ಸಾವಿರಾರು ರೈತರ ಕೃಷಿಭೂಮಿ ಮುಳುಗಡೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಎತ್ತಂಗಡಿ ಹಿಂದೆ ಮರಳು ಲಾಬಿ?
ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸಾಥ್: ಕಲ್ಲೊಡ್ಡು ಹೊಸಕೆರೆ ನಿರ್ಮಾಣ ಯೋಜನೆ ವಿರೋಧಿಸಿ ಇಂದು ಸಾಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕೂಡ ಭಾಗವಹಿಸಿದ್ದು, ಪಕ್ಷಾತೀತವಾಗಿ ಹೋರಾಟದಲ್ಲಿ ಎಲ್ಲಾ ನಾಯಕರು ಭಾಗವಹಿಸಿದ್ದರು. ಈ ಸಂರ್ಭದಲ್ಲಿ "ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಸಾಗರದ ರೈತರ ಪರವಾಗಿ ನಾನು ನಿಲ್ಲುತ್ತೇನೆ" ಎಂದರು.