ಈ ಗ್ರಾಮ ಸ್ವಯಂ ಲಾಕ್ಡೌನ್; ಅನಗತ್ಯವಾಗಿ ಹೊರ ಬಂದರೆ ದಂಡ!
ಶಿವಮೊಗ್ಗ, ಮೇ 18; ಹಳ್ಳಿ ಹಳ್ಳಿಯಲ್ಲೂ ಕೋವಿಡ್ ಸೋಂಕು ಹರಡವುದನ್ನು ತಡೆಯಲು ಗ್ರಾಮಸ್ಥರು ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ತಾಲೂಕಿನ ಹಳ್ಳಿಯೊಂದು ಸೋಂಕು ವ್ಯಾಪಕಗೊಳ್ಳುವುದನ್ನು ತಡೆಯಲು ಸ್ವಯಂ ಲಾಕ್ಡೌನ್ ವಿಧಿಸಿಕೊಂಡಿದೆ.
ಗ್ರಾಮದಲ್ಲಿ 40ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಊರಿನ ಪ್ರಮುಖರೊಬ್ಬರು ಕೋವಿಡ್ಗೆ ತುತ್ತಾಗಿ ಮೃತರಾಗಿದ್ದಾರೆ. ಆ ಬಳಿಕ ಗ್ರಾಮಸ್ಥರು ಸಭೆ ಸೇರಿ ಜನರು, ವಾಹನ ಓಡಾಡಕ್ಕೆ ಸ್ವಯಂ ನಿರ್ಬಂಧ ಹೇರಿದ್ದಾರೆ.
ಶಿವಮೊಗ್ಗ; 4 ದಿನದ ಲಾಕ್ಡೌನ್ ಈ ವಾರವೂ ಮುಂದುವರಿಕೆ
ಶಿವಮೊಗ್ಗ ತಾಲೂಕು ಹಾರನಹಳ್ಳಿ ಹೋಬಳಿಯ ನಾರಾಯಣಪುರ ಗ್ರಾಮದಲ್ಲಿ ಸ್ವಯಂ ಲಾಕ್ಡೌನ್ ಜಾರಿಯಲ್ಲಿದೆ. "ಗ್ರಾಮದಲ್ಲಿ ಸೋಂಕು ಕಡಿಮೆಯಾಗುವವರೆಗೆ ಲಾಕ್ಡೌನ್ ಮುಂದುವರೆಯಲಿದೆ" ಎಂದು ಗ್ರಾಮದ ಮುಖಂಡ ಕುಮಾರ್ ನಾಯ್ಕ ಹೇಳಿದ್ದಾರೆ.
ಶಿವಮೊಗ್ಗ ನಗರದಲ್ಲಿ ವಾರದ 4 ದಿನ ಸಂಪೂರ್ಣ ಲಾಕ್ ಡೌನ್
ನಾರಾಯಣಪುರದಲ್ಲಿ ಸುಮಾರು 350 ಮನೆಗಳಿವೆ. ಒಂದೂವರೆ ಸಾವಿರದಷ್ಟು ಜನಸಂಖ್ಯೆ ಇದೆ. ಸದ್ಯ 40 ರಿಂದ 45 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸುಮಾರು 10 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ; ವಾಹನ ತಪಾಸಣೆ ವೇಳೆ ಕೋವಿಡ್ ಸೋಂಕಿತ ಪ್ರತ್ಯಕ್ಷ
ಗ್ರಾಮದ ಪ್ರಮುಖರೊಬ್ಬರು ಸಾವು
ಕೋವಿಡ್ ಸೋಂಕು ತಗುಲಿದ್ದ ಗ್ರಾಮದ ಪ್ರಮುಖರಾದ ಹೇಮ್ಲಾನಾಯ್ಕ ಮೃತಪಟ್ಟಿದ್ದಾರೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅದಕ್ಕಾಗಿ ಸಭೆ ಸೇರಿ ಸ್ವಯಂ ಲಾಕ್ಡೌನ್ಗೆ ಒಳಗಾಗಿದ್ದಾರೆ. ಜನರು ಹೊರಗೆ ಓಡಾಡದಂತೆ ತಡೆಯಲು ಮತ್ತು ಪರ ಊರಿನ ಜನರು ನಾರಾಯಣಪುರದೊಳಗೆ ಬಾರದಂತೆ ನೋಡಿಕೊಳ್ಳಲು ಕೆಲವು ಯುವಕರಿಗೆ ಜವಾಬ್ದಾರಿ ನೀಡಲಾಗಿದೆ.
ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ
ಜನರು ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶವನ್ನು ನೀಡಲಾಗಿದೆ. ಬೆಳಗ್ಗೆ 9 ಗಂಟೆ ಬಳಿಕವು ಅಂಗಡಿ ತೆಗೆದಿದ್ದರೆ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
2 ಸಾವಿರ ರೂ. ದಂಡ
ಬೆಳಗ್ಗೆ 6 ರಿಂದ 9 ಗಂಟೆಯ ಸಮಯ ಹೊರತುಪಡಿಸಿ ಉಳಿದ ಅವಧಿಯಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರ ಬಂದರೆ 2 ಸಾವಿರ ರೂ. ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಜನರು ಸಹ ಗ್ರಾಮಸ್ಥರು ವಿಧಿಸಿದ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.
ದಿನಸಿ ಪೂರೈಕೆಗೆ ವ್ಯವಸ್ಥೆ
"ಗ್ರಾಮದಲ್ಲಿ ಬಡವರಿದ್ದಾರೆ. ಅವರಿಗೆ ಸರ್ಕಾರದಿಂದ ರೇಷನ್ ಪೂರೈಕೆ ಮಾಡಲಾಗಿದೆ. ಒಂದು ವೇಳೆ ಇದನ್ನು ಮೀರಿ ಅಗತ್ಯ ವಸ್ತುಗಳ ಬೇಕಿದ್ದರೆ ಊರಿನ ಮುಖಂಡರಿಗೆ ತಿಳಿಸಿದರೆ ದಿನಸಿ ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಕುಮಾರ್ ನಾಯ್ಕ ಹೇಳಿದ್ದಾರೆ.
ಸ್ವಯಂ ಲಾಕ್ ಡೌನ್ ವಿಧಿಸಿಕೊಂಡು ನಾರಾಯಣಪುರ ಗ್ರಾಮದವರು ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮಗಳ ಹಂತದಲ್ಲಿ ಈ ಮಾದರಿ ಅನುಸರಿಸಿದರೆ ಜಿಲ್ಲೆಯಲ್ಲಿ ಸೋಂಕು ತಡೆಗೆ ಅನುಕೂಲವಾಗಲಿದೆ.