ವಿದ್ಯುತ್ ತಂತಿಗೆ ಬಲಿಯಾದ ನವಿಲು; ಅಂತಿಮ ನಮನ ಸಲ್ಲಿಸಿದ ಸ್ಥಳೀಯರು
ಶಿವಮೊಗ್ಗ, ಆಗಸ್ಟ್ 01: ಊರಿನಲ್ಲಿ ಜನರೊಂದಿಗೆ ಬೆರೆತು, ಊರಿನಲ್ಲೇ ಓಡಾಡಿಕೊಂಡಿದ್ದ ನವಿಲೊಂದು ವಿದ್ಯುತ್ ತಂತಿಗೆ ಸಿಲುಕಿ ಇಂದು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆಯಲ್ಲಿ ನಡೆದಿದೆ.
ಕಳೆದ 2 ವರ್ಷದಿಂದಲೂ ಹಾರೋಗೋಳಿಗೆಯಲ್ಲಿಯೇ ಈ ನವಿಲು ನೆಲೆಸಿತ್ತು. ಈ ನವಿಲಿಗೆ ಕೆಲವರು ಪ್ರೀತಿಯಿಂದ ರಾಮು ಎಂದು ಕರೆಯುತ್ತಿದ್ದರು. ಈ ನವಿಲು ಚಿಂತಕ ನೆಂಪೆ ದೇವರಾಜ್ ಮತ್ತು ಅವರ ಪತ್ನಿ ಸುಧಾ ಅವರ ಮಾತು ಕೇಳುವ, ನೃತ್ಯ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನವಿಲು ಇಡೀ ಊರಿನ ಜನರ ಪ್ರೀತಿಗೆ ಪಾತ್ರವಾಗಿತ್ತು. ದಿನವೂ ಮನೆಗಳ ಬಳಿ ಓಡಾಡಿಕೊಂಡಿತ್ತು.
ಚಿತ್ರದುರ್ಗದಲ್ಲಿ ವಿಷಾಹಾರ ಸೇವಿಸಿ ನವಿಲುಗಳು ಸಾವು
ಇಂದು ವಿದ್ಯುತ್ ತಂತಿ ಮೇಲೆ ಅಕಸ್ಮಾತ್ ಬಿದ್ದು ನವಿಲು ಸಾವನ್ನಪ್ಪಿದೆ. ನವಿಲು ಸತ್ತ ಸುದ್ದಿಯನ್ನು ಅರಣ್ಯ ಇಲಾಖೆಗೆ ತಿಳಿಸಿ, ನೆಂಪೆ ದೇವರಾಜ್ ಮತ್ತು ಸ್ಥಳೀಯರು ಸೇರಿ ನವಿಲಿಗೆ ಬಿಳಿ ಬಟ್ಟೆ ಹೊದಿಸಿ, ಹೂವು ಹಾಕಿ ಅಂತಿಮ ನಮನ ಸಲ್ಲಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ನವಿಲಿನ ಸಂಸ್ಕಾರ ಮಾಡಿದರು.