ಹುಣಸೋಡು ಸ್ಪೋಟದ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಶಿವಮೊಗ್ಗ, ಜನವರಿ 27: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ನಡೆದ ಜಿಲಿಟಿನ್ ಸ್ಪೋಟದ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ, ಪರೀಶಿಲನೆ ನಡೆಸಿದರು.
40 ನಿಮಿಷಗಳ ಕಾಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಥಳ ವೀಕ್ಷಣೆ ನಡೆಸಿದ್ದಾರೆ. ಸ್ಪೋಟ ನಡೆದ ಎರಡು ದಿನಗಳ ನಂತರ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅವರು ಎರಡು ನಿಮಿಷದಲ್ಲಿ ಪರಿಶೀಲನೆ ನಡೆಸಿದ್ದರು.
ಎರಡು ನಿಮಿಷದಲ್ಲಿ ಏನು ಸ್ಥಳ ಪರಿಶೀಲನೆ ನಡೆಸಲಾಗುತ್ತದೆ ಎಂಬ ಮಾಧ್ಯಮದಲ್ಲಿ ಸುದ್ದಿ ಹರಡಿತ್ತು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸ್ಪೋಟದ ಸ್ಥಳಕ್ಕೆ 1-17ಕ್ಕೆ ಭೇಟಿ ನೀಡಿ 1-57ಕ್ಕೆ ಸ್ಪೋಟದ ಸ್ಥಳದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಹುಣಸೋಡು ಸ್ಥಳೀಯ ನಿವಾಸಿಗಳೊಂದಿಗೆ ಯೋಗಕ್ಷೇಮ ವಿಚಾರಿಸಿ, ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಹುಣಸೋಡಿನಲ್ಲಿ ಜ.೨೧ ರಂದು ರೈಲ್ವೇ ಕ್ರಷರ್ನಲ್ಲಿ ಉಂಟಾಗಿದ್ದ ಭಾರಿ ಸ್ಫೋಟದಲ್ಲಿ 5 ಕಾರ್ಮಿಕರು ಮೃತಪಟ್ಟಿದ್ದರು. ಅಕ್ರಮ ಕಲ್ಲು ಗಣಿಗಾರಿಕೆಗಾಗಿ ಸುಮಾರು 50 ಡೈನಮೈಟ್ಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಡೈನಾಮೈಟ್ ಸಿಡಿದು ಭಾರಿ ಅನಾಹುತ ಸಂಭವಿಸಿತ್ತು.