ಸಮಾಜವಾದಿ ಚಿಂತಕ, ಹಿರಿಯ ಸಾಹಿತಿ ಡಿ.ಎಸ್.ನಾಗಭೂಷಣ್ ಸ್ಮರಣೆ
ಶಿವಮೊಗ್ಗ, ಮೇ 19: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ (70) ಅವರು ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ. ವಿನೋಬನಗರದ ಕಲ್ಲಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಸವಿತಾ ಮತ್ತು ಸಾಹಿತ್ಯ ಅಭಿಮಾನಿಗಳನ್ನು ಅವರು ಅಗಲಿಸಿದ್ದಾರೆ. ಸಂಜೆವರೆಗೂ ಕಲ್ಲಹಳ್ಳಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಂಜೆ ಅಂತ್ಯಸಂಸ್ಕಾರ: ಮೃತ ಡಿ.ಎಸ್.ನಾಗಭೂಷಣ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ಚಿತಾಗಾರದಲ್ಲಿ ನಡೆಯಲಿರುವುದು. ಅಲ್ಲಿಯವರೆಗೂ ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಲಾಗಿದೆ.
ಮೂಲತಃ ಬೆಂಗಳೂರಿನವರು: ಡಿ.ಎಸ್.ನಾಗಭೂಷಣ್ ಅವರು ಮೂಲತಃ ಬೆಂಗಳೂರಿನ ಹೊಸಕೋಟೆ ತಾಲೂಕಿನ ತಿಮ್ಮಸಂದ್ರದವರು. 1952ರ ಫೆಬ್ರಬರಿ 1ರಂದು ಜನನ. 1973ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1975 ರಿಂದ 2005ರವರೆಗೆ ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಸ್ವಯಂ ನಿವೃತ್ತಿ ಪಡೆದು ಪತ್ನಿ ಸವಿತಾ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಕುವೆಂಪು ಸಾಹಿತ್ಯ ದರ್ಶನ ರಚನೆ
ಸಮಾಜವಾದಿ ಚಿಂತನೆ ಮತ್ತು ಚರ್ಚೆಗಳ ವಿಚಾರದಲ್ಲಿ ಡಿ.ಎಸ್.ನಾಗಭೂಷಣ್ ಅವರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಅಲ್ಲದೆ ಬರಹಗಳ ಮೂಲಕವು ಅವರು ಗುರುತಿಸಿಕೊಂಡಿದ್ದರು. ಇಂದಿಗೆ ಬೇಕಾದ ಗಾಂಧಿ, ಲೋಹಿಯಾ ಜೊತೆಯಲ್ಲಿ, ರೂಪ ರೂಪಗಳನ್ನು ದಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ನಮ್ಮ ಶಾಮಣ್ಣ, ಕನ್ನಡದ ಮನಸು ಮತ್ತು ಇತರೆ ಲೇಖನಗಳು, ಕಾಲಗ್ರಾಮ, ಮರಳಿ ಬರಲಿದೆ ಸಮಾಜವಾದ ಸೇರಿದಂತೆ ಹಲವರು ಕೃತಿಗಳನ್ನು ರಚಿಸಿದ್ದಾರೆ.
ಸ್ವ ಆವಿಷ್ಕಾರದ ಸಂಭ್ರಮ:
ಸಂಸ್ಕತಿ ಚಿಂತಕರಾಗಿದ್ದ ಲಕ್ಷ್ಮೀಶ ತೋಳ್ಪಾಡಿ ಅವರು ಮಾಸಿಕವೊಂದರಲ್ಲಿ ಅವರ ಕುರಿತು ಬರೆದಿದ್ದರು. ಗಾಂಧಿಯವರ ಚಿತ್ರ ಆರಾಧನಾ ಭಾವದಿಂದ ಬಾನೇರದಂತೆ, ವಿಮರ್ಶೆಯ ಉಳಿಯಿಂದ ಮೂರ್ತಿ ಭಂಜನೆಯೂ ಆಗದಂತೆ ವರದಿ ಮಾತ್ರ ವಿವರಣೆಗಳಿಂದ ರಕ್ತ ಹೀನವು ಆಗದಂತೆ, ಸಾವಧಾನದ ಓದುಗರಿಗೆ ತಮ್ಮೋಳಗೆ ಅರ್ತವಾಗುವಂತೆ ತಮ್ಮದೇ ಪೂರ್ವಾಗ್ರಹಗಳ ತಿಕ್ಕಾಟದ ಓಳಗಿನಿಂದಲೇ ಗಾಂಧಿ ಮುರ್ತಿಯೊಂದು ಮೂಡಿಬರಲನುವಾಗುವಂತೆ ಬಹುಪರಿಶ್ರಮದಿಂದ ಬರೆದಿರತಕ್ಕ ಅಪೂರ್ವವಾದ ಬರಹ ಇದಾಗಿದೆ. ಗಾಂಧಿ ತಮ್ಮನ್ನು ತಾವೇ ಹೇಗೆ ಕಡೆದುಕೊಂಡರೆನ್ನುವುದನ್ನು ಪಾರದರ್ಶಕವಾಗಿ ತೋರಿಸುತ್ತಿರುವ ಗ್ರಂಥವಿದು. ಪಾರದರ್ಶಕತೆಗೆ ವಿರೋಧಿಯಾದ ಎಲ್ಲ ಬಗೆಯ ವಾಗಾಡಂಬರಗಳನ್ನು ಕೆಬಿಟ್ಟ ಬರಹವಿದು. ಒಂದು ಮಾತಿನಲ್ಲಿ ಹೇಳಬೇಕೆಂದರೆ ಉಪವಾಸ ಕೂರುತ್ತ, ಉಪವಾಸದಿಂದಲೇ ಪುಷ್ಟಿಗೊಳ್ಳುತ್ತಾ ಹೋಗುವ ಗಾಂಧಿ ವ್ಯಕ್ತಿತ್ವವನ್ನು ತೋರಿಸಬೇಕು ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಂಡ ಬರಹವಿದು ಎಂದು ಬಣ್ಣಿಸಿದ್ದಾರೆ
ವಿವಿಧ ಸಂಸ್ಥೆಗಳ ಪ್ರತಿಷ್ಠಿತ ಪ್ರಶಸ್ತಿ
ಡಿ.ಎಸ್.ನಾಗಭೂಷಣ್ ಅವರ ಗಾಂಧಿ ಕಥನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯು 2021ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಹಾತ್ಮ ಗಾಂಧೀಜಿ ಅವರ ಬದುಕಿನ ವಿವರನ್ನು ಕಟ್ಟಿಕೊಡುವ ಅಪರೂಪದ ಕೃತಿ ಇದಾಗಿತ್ತು. ಇದು ಹಲವು ಭಾರಿ ಮರು ಮುದ್ರಣವನ್ನು ಕಂಡಿತ್ತು. ಅನೇಕ ಸಾಹಿತ್ಯ ಪ್ರಶಸ್ತಿಗಳು, ವಿವಿಧ ಸಂಘಟನೆಗಳಿಂದಲು ಡಿ.ಎಸ್.ನಾಗಭೂಷಣ್ ಅವರಿಗೆ ಗೌರವ ಸಲ್ಲಿಸಿದ್ದವು. ನೇರ ನುಡಿ ಮತ್ತು ಸಮಕಾಲಿನ ವಿಚಾರಗಳ ಪ್ರಖರ ವಿಶ್ಲೇಷಣೆ ಮತ್ತು ವಿಮರ್ಶೆ ಮಾಡುತ್ತಿದ್ದರು. ಹೊಸ ಮನುಷ್ಯ ಎಂಬ ಮಾಸಿಕ ಪತ್ರಿಕೆಗೆ ಸತತ 10 ವರ್ಷ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಇವತ್ತು ಸಂಜೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ಡಿ.ಎಸ್.ನಾಗಭೂಷಣ್ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ
ಡಿ.ಎಸ್.ನಾಗಭೂಷಣ್ ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ‘ಅನ್ಯಾಯ, ಅಸಮಾನತೆ ಮತ್ತು ಆತ್ಮವಂಚಕ ನಡವಳಿಕೆಗಳ ವಿರುದ್ಧದ ಹೋರಾಟಕ್ಕೆ, ಸಮಾಜವಾದಿ ಚಿಂತನೆಗಳನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದ್ದ ಆತ್ಮೀಯರಾಗಿದ್ದ ಡಿ.ಎಸ್.ನಾಗಭೂಷಣ್ ಅವರ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ಅವರ ಪತ್ನಿ ಮತ್ತು ಗೆಳೆಯರೆಲ್ಲರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ವನ್ನು ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಅದನ್ನು ಓದುತ್ತಿದ್ದೇನೆ ಎಂದಾಗ ಖುಷಿಪಟ್ಟಿದ್ದರು. ಲೋಹಿಯಾ ಚಿಂತನೆಯ ಪುಸ್ತಕಗಳೂ ಸೇರಿದಂತೆ ಅವರ ಎಲ್ಲ ಕೃತಿಗಳ ಮೂಲಕ ನಾಗಭೂಷಣ್ ನಮ್ಮ ನೆನಪಲ್ಲಿ ಸದಾ ಹಸಿರಾಗಿರುತ್ತಾರೆ.' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಎಸ್.ನಾಗಭೂಷಣ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
‘ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಸಾಮಾಜಿಕ ಚಿಂತಕ ಡಿ.ಎಸ್. ನಾಗಭೂಷಣ ಅವರು ಕಾಲವಾದ ವಿಷಯ ತಿಳಿದು ಬೇಸರವಾಯಿತು. ಗಾಂಧಿ ಚಿಂತನೆಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
Recommended Video