ರಮೇಶ್ ಜಾರಕಿಹೊಳಿಯನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ : ಯಡಿಯೂರಪ್ಪ
Recommended Video
ಶಿವಮೊಗ್ಗ, ಏಪ್ರಿಲ್ 25 : 'ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿ ಸೇರುವಂತೆ ನಾವು ಆಹ್ವಾನ ನೀಡಿಲ್ಲ. ಆ ಪಕ್ಷದಲ್ಲಿ ಉಂಟಾಗಿರುವ ಗೊಂದಲದಲ್ಲಿ ನಾವು ಕೈ ಹಾಕಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬುಧವಾರ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತುಗಳನ್ನು ಆಡಿದ್ದಾರೆ. ಅವರು ಬಿಜೆಪಿ ಸೇರಬಹುದು ಎಂಬ ಸುದ್ದಿ ಹಬ್ಬಿದೆ. ಆದರೆ, ರಾಜೀನಾಮೆ ದಿನಾಂಕದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಬೆಂಗಳೂರಿಗೆ ಬಂದ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಪಕ್ಷ ಸೇರುವಂತೆ ಬಿಜೆಪಿ ರಮೇಶ್ ಜಾರಕಿಹೊಳಿ ಅವರಿಗೆ ಆಹ್ವಾನ ನೀಡಬಹುದು ಎಂಬ ಸುದ್ದಿ ಹಬ್ಬಿತ್ತು. ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, 'ಬಿಜೆಪಿ ಸೇರುವಂತೆ ನಾವು ಆಹ್ವಾನ ನೀಡಿಲ್ಲ' ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ರಾಜೀನಾಮೆ : ಯಾರು, ಏನು ಹೇಳಿದರು?
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, 'ಒಬ್ಬನೇ ರಾಜೀನಾಮೆ ನೀಡಿದರೆ ಏನೂ ಪ್ರಯೋಜನವಿಲ್ಲ. ಒಂದಷ್ಟು ಜನ ಸೇರಿ ರಾಜೀನಾಮೆ ನೀಡುತ್ತೇವೆ. ರಾಜೀನಾಮೆ ನೀಡುವುದಂತೂ ಸತ್ಯ' ಎಂದು ಹೇಳಿದ್ದಾರೆ....
ತೇಜಸ್ವಿ ಸೂರ್ಯ ಸೇರಿ 22 ಸೀಟು ಗೆಲ್ಲುತ್ತೇವೆ : ಯಡಿಯೂರಪ್ಪ
ಯಡಿಯೂರಪ್ಪ ಹೇಳಿದ್ದೇನು?
'ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳಿಗೆ ನಾವು ಕಾರಣರಲ್ಲ. ಸದ್ಯ ನಮ್ಮ ಗಮನ ಏನಿದ್ದರೂ ಎರಡು ಕ್ಷೇತ್ರಗಳ ಉಪ ಚುನಾವಣೆ ಮೇಲೆ. ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಗುರುವಾರ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಎರಡೂ ಕ್ಷೇತ್ರದಲ್ಲೂ ಗೆಲುವು ಸಾಧಿಸುವುದು ನಮ್ಮ ಗುರಿ' ಎಂದು ಯಡಿಯೂರಪ್ಪ ಹೇಳಿದರು.
22 ಸ್ಥಾನ ಗೆಲ್ಲುತ್ತೇವೆ
'ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕ ಸ್ಥಾನದಲ್ಲಿ ಗೆಲುವು ಪಡೆಯಲಿದೆ. ಈ ಬಾರಿ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನಾವು 22 ಸ್ಥಾನ ಗೆದ್ದ ಮೇಲೆ ಆಗುವ ಪರಿಣಾಮಗಳನ್ನು ಕಾದು ನೋಡಿ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಒಂದೂವರೆ ಪಕ್ಷ ಮತಗಳ ಅಂತರದ ಗೆಲುವು
'ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಮುಖಂಡರ ಸಭೆ ನಡೆಸಿದ್ದೇನೆ. ಕನಿಷ್ಠ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಅವರು ಗೆದ್ದು ಸಂಸತ್ ಪ್ರವೇಶ ಮಾಡಲಿದ್ದಾರೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಜನರು ತಕ್ಕ ಪಾಠ ಕಲಿಸುತ್ತಾರೆ
'ಹಣ ಹಂಚಿ ಚುನಾವಣೆ ಗೆಲ್ಲಬಹುದು ಎನ್ನುವವರಿಗೆ ಶಿವಮೊಗ್ಗದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರೇವಣ್ಣ, ದೇವೇಗೌಡ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಎಲ್ಲರೂ ಬಂದರು. ಅಪ್ಪಾಜಿಗೌಡರಿಗೆ ಸೇರಿದ ಹಣ ಸಿಕ್ತು. ಆದರೆ, ಗೆಲುವು ನಿಶ್ಚಿತ' ಎಂದು ಯಡಿಯೂರಪ್ಪ ಹೇಳಿದರು.