ಬ್ರೇಕಿಂಗ್ ನ್ಯೂಸ್ : ಬೆಂಗಳೂರಿಗೆ ಶರಾವತಿ ನೀರು ತರುವ ಪ್ರಸ್ತಾಪವಿಲ್ಲ
ಶಿವಮೊಗ್ಗ, ಆಗಸ್ಟ್ 13 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಿವಮೊಗ್ಗದ ಜನರಿಗೆ ಶುಭ ಸುದ್ದಿ ನೀಡಿದ್ದಾರೆ. ಬೆಂಗಳೂರಿಗೆ ಶರಾವತಿ ನದಿ ನೀರು ತೆಗೆದುಕೊಂಡು ಹೋಗುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಸಾಗರದಲ್ಲಿ ಮಂಗಳವಾರ ಮಾತನಾಡಿದ ಯಡಿಯೂರಪ್ಪ, "ಶರಾವತಿ ನದಿ ನೀರನ್ನು ಯಾವುದೇ ಕಾರಣಕ್ಕೊ ಬೆಂಗಳೂರಿಗೆ ತೆಗೆದುಕೊಂಡು ಹೋಗುವುದಿಲ್ಲ. ಪ್ರಸ್ತಾವನೆಯನ್ನು ಕೈ ಬಿಡಲಾಗುವುದು" ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿಗೆ ಶರಾವತಿ ನದಿ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಜುಲೈ 10ರಂದು ಶಿವಮೊಗ್ಗ ಬಂದ್ ನಡೆಸಿ ಸರ್ಕಾರದ ತೀರ್ಮಾನವನ್ನು ಖಂಡಿಸಲಾಗಿತ್ತು. ಯೋಜನೆ ಕೈ ಬಿಡುವಂತೆ ಆಗ್ರಹಿಸಲಾಗಿತ್ತು.
ಬೆಂಗಳೂರಿಗೆ ಶರಾವತಿ ನೀರು, ಯೋಜನೆ ವಿರುದ್ಧ ಪತ್ರ ಚಳವಳಿ
ಬೆಂಗಳೂರು ಜಲಮಂಡಳಿ ನಿವೃತ್ತ ಇಂಜಿನಿಯರ್ ಬಿ. ಎನ್. ತ್ಯಾಗರಾಜ್ ನೀಡಿದ ವರದಿ ಅನ್ವಯ ಶರಾವತಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಅಂದಿನ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆದೇಶ ನೀಡಿದ್ದರು.
ಮಲೆನಾಡಿನಲ್ಲಿ ಯೋಜನೆಯ ಪ್ರಸ್ತಾಪಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸಾಗರ, ಹೊಸನಗರ, ಶಿವಮೊಗ್ಗ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಯೋಜನೆ ಕೈ ಬಿಡಿ ಎಂದು ಒತ್ತಾಯಿಸಲಾಗಿತ್ತು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕ ಯೋಜನೆಯಾಗಿದೆ. ರಾಜ್ಯಕ್ಕೆ ಬೆಳಕು ನೀಡುವ ಶರಾವತಿ ನದಿಯನ್ನು ಮುಟ್ಟಿದರೆ ರಾಜ್ಯವೇ ಕತ್ತಲಲ್ಲಿ ಮುಳುಗಲಿದೆ ಎಂದು ಮಲೆನಾಡು ಭಾಗದ ಜನರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.