ತೀರ್ಥಹಳ್ಳಿ; ಸ್ಮಶಾನಕ್ಕೆ ರಸ್ತೆ ಇಲ್ಲ, ಮಳೆಯಲ್ಲೇ ಶವದ ಸಂಸ್ಕಾರ
ಶಿವಮೊಗ್ಗ, ಆಗಸ್ಟ್, 07: ತೀರ್ಥಹಳ್ಳಿ ತಾಲೂಕು ಕೋಡ್ಲು ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ಎದೆ ಮಟ್ಟದವರೆಗೆ ಹರಿಯುತ್ತಿರುವ ಮಳೆ ನೀರಿನಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ತೀರ್ಥಹಳ್ಳಿ ತಾಲೂಕು ಕೋಡ್ಲು ಗ್ರಾಮದಲ್ಲಿ 80 ವರ್ಷದ ತಮ್ಮಯ್ಯ ಗೌಡ ಎಂಬುವವರು ವಯೋಸಹಜವಾಗಿ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ನೀರಿನಲ್ಲಿ ಸಾಗಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀರ್ಥಹಳ್ಳಿ: ಪತಿ ಎದುರಲ್ಲೇ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೆ ಯತ್ನ
ಮಳೆಯಲ್ಲೇ ಅಂತ್ಯಸಂಸ್ಕಾರ: ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಸಮರ್ಪಕವಾಗಿಲ್ಲ. ಮಳೆ ಬಂದರೆ ಸಾಕು ಅಲ್ಲಿನ ರಸ್ತೆ ಕೆರೆಯಂತಾಗಿಬಿಡುತ್ತದೆ. ಹೀಗೆ ವಯೋಸಹಜವಾಗಿ ತಮ್ಮಯ್ಯಗೌಡ ಅವರು ನಿಧನರಾದ ಹಿನ್ನೆಲೆ ಅವರ ಮೃತದೇವಹನ್ನು ಹರಿಯುತ್ತಿರುವ ಮಳೆ ನೀರಿನಲ್ಲೇ ಮೆರವಣಿಗೆ ಮಾಡಲಾಯಿತು. ಆರು ಜನರು ಮೃತದೇಹವನ್ನು ನೀರಿನಲ್ಲಿ ಸಾಗಿಸುವ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.
ಎದೆ ಮಟ್ಟದವರೆಗೂ ಹರಿಯುತ್ತಿದ್ದ ಮಳೆ ನೀರಿನಲ್ಲಿಯೇ ಸಂಬಂಧಿಗಳು, ಗ್ರಾಮಸ್ಥರು ಮೃತದೇಹವನ್ನು ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದಾರೆ. ಸ್ಮಶಾನಕ್ಕೆ ಸೂಕ್ತ ವ್ಯವಸ್ಥೆ ಇಲ್ಲದಿದ್ದರಿಂದ ಜೋರಾಗಿ ಸುರಿಯುವ ಮಳೆಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶೀಟ್ ಹಾಕಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಕೊಳ್ಳಲಾಗಿತ್ತು.
ಮನವಿಗೂ ಕ್ಯಾರೆ ಅನ್ನುತ್ತಿಲ್ಲ: ಸ್ಮಶಾನದ ಹಾದಿಗೆ ಮಣ್ಣು ಹಾಕಿ ಎತ್ತರಿಸುವಂತೆ ಹಲವು ಭಾರೀ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಮಳೆಗಾಲ ಶುರುವಾದರೆ ಈ ಮಾರ್ಗದಲ್ಲಿ ನೀರು ಹರಿಯಲು ಆರಂಭವಾಗುತ್ತದೆ. ಮೂರ್ನಾಲ್ಕು ತಿಂಗಳು ರಸ್ತೆಯಲ್ಲಿ ನೀರು ಹರಿಯುವುದರಿಂದ ಸ್ಮಶಾನಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಸದ್ಯ ಮೃತದೇಹವನ್ನು ನೀರಿನಲ್ಲಿ ಹೊತ್ತು ಸಾಗುವ ದೃಶ್ಯ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಎಚ್ಚರಗೊಳ್ಳುವಂತೆ ಮಾಡಿದೆ.