ನೆಟ್ವರ್ಕ್ ಸರಿಪಡಿಸದಿದ್ದರೆ ವೋಟ್ ಹಾಕಲ್ಲ; ಗ್ರಾಮಸ್ಥರ ಎಚ್ಚರಿಕೆ
ಶಿವಮೊಗ್ಗ, ಜುಲೈ 13; ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಈಗಾಗಲೆ 'ನೋ ನೆಟ್ವರ್ಕ್, ನೋ ವೋಟಿಂಗ್' ಅಭಿಯಾನ ಶುರುವಾಗಿದೆ. ಇದಕ್ಕೆ ಭಾರೀ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.
ಶಿವಮೊಗ್ಗ: 5ಜಿ ಯುಗದಲ್ಲೂ ನೆಟ್ವರ್ಕ್ಗಾಗಿ ಮರದಡಿ ಟೆಂಟ್ ನಿರ್ಮಿಸಿಕೊಂಡ ಯುವತಿ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯಿತಿಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿವೆ.
ನೆಟ್ ವರ್ಕ್ ಸಮಸ್ಯೆ; ವಿದ್ಯಾರ್ಥಿಗಳ ಅರಣ್ಯರೋದನ
ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ನೆಟ್ವರ್ಕ್ ಇಲ್ಲದೇ ಜನರು ಪರದಾಟ ನಡೆಸುತ್ತಾರೆ. 5ಜಿ ಬಗ್ಗೆ ಮಾತನಾಡುವ ಸರ್ಕಾರಗಳು 2ಜಿ ನೆಟ್ವರ್ಕ್ ಸಹ ಒದಗಿಸಲು ವಿಫಲವಾಗಿವೆ.
ಮೊಬೈಲ್ ಬಿಟ್ಟು ಬಾಲ್ ಹಿಡಿದ ಮಕ್ಕಳು! ಚಿಣ್ಣರ 'ಫುಟ್ಬಾಲ್ ಚಾಲೆಂಜ್’ ವೈರಲ್!
ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ
ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಂ ವೇಳೆ ವಿದ್ಯಾರ್ಥಿಗಳು, ಉದ್ಯೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯರು ನೆಟ್ವರ್ಕ್ ಕೊಡಿಸುವಂತೆ ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆದಿದ್ದಾಯ್ತು, ಜನಪ್ರತಿನಿಧಿಗಳಿಗೆ ಬೇಡಿದ್ದಾಯ್ತು. ಪ್ರಯೋಜನವಾಗದ ಹಿನ್ನೆಲೆ, ‘ನೋ ನೆಟ್ವರ್ಕ್, ನೋ ವೋಟಿಂಗ್' ಅಭಿಯಾನ ಶುರು ಮಾಡಿದ್ದಾರೆ.
ಸಮಿತಿ ಅಸ್ತಿತ್ವಕ್ಕೆ, ಜನ ಬೆಂಬಲ ಹೆಚ್ಚಳ
ಅಭಿಯಾನದ ಭಾಗವಾಗಿ ಕಟ್ಟಿನಕಾರು ಕಾರಣಿ ನೆಟ್ವರ್ಕ್ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಒನ್ ಇಂಡಿಯಾ ಜೊತೆಗೆ ಮಾತನಾಡಿದ ಹೋರಾಟ ಸಮಿತಿಯ ರಾಜಕುಮಾರ್, "ಈಗ ನೆಟ್ವರ್ಕ್ ಕೂಡ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ. ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನೆಟ್ವರ್ಕ್ ಕೊಟ್ಟರಷ್ಟೇ ಮತದಾನ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಗುಡ್ಡ, ಬೆಟ್ಟ ಹತ್ತಿದರೂ ನೆಟ್ವರ್ಕ್ ಇಲ್ಲ
"ಆನ್ಲೈನ್ ಶಿಕ್ಷಣಕ್ಕೆ ಒತ್ತು ಕೊಡುವ ಸರ್ಕಾರ ನೆಟ್ವರ್ಕ್ ಕೊಡದಿರುವುದು ದುರಾದೃಷ್ಟಕರ. ರಾಜ್ಯದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಮಕ್ಕಳು ನೆಟ್ವರ್ಕ್ ಸಿಗದೇ ಪರದಾಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ವರ್ಕ್ ಫ್ರಂ ಹೋಂ ಮಾಡುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಫೋನ್ ಕರೆ ಮಾಡಬೇಕು ಎಂದರೂ ಗುಡ್ಡ, ಬೆಟ್ಟ ಹತ್ತಿ ಹೋಗಬೇಕು. ಅಲ್ಲಿ ಒಂದು ಪಾಯಿಂಟ್ ನೆಟ್ವರ್ಕ್ ಸಿಕ್ಕರೆ ಅದೃಷ್ಟ" ಎಂದು ರಾಜಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮನೆ ಮನೆಗೆ ಹೋಗಿ ಮನವರಿಕೆ
"ಮೊಬೈಲ್ ನೆಟ್ವರ್ಕ್ ಕೊಡುವಂತೆ ಹಲವು ಸಲ ಬೇಡಿಕೆ ಸಲ್ಲಿಸಿದ್ದೇವೆ. ಚುನಾವಣೆ ಹೊತ್ತಿಗೆ ಮತ ಕೇಳಲು ಬರುವವರು ಚುನಾವಣೆ ಬಳಿಕ ನೆಟ್ವರ್ಕ್ ಕೊಡಿಸುವ ಭರವಸೆ ನೀಡುತ್ತಿದ್ದರು. ಹಾಗಾಗಿ ಈ ಭಾರಿ ನೋ ನೆಟ್ವರ್ಕ್, ನೋ ವೋಟಿಂಗ್ ಅಭಿಯಾನ ಶುರು ಮಾಡಿದ್ದೇವೆ. ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದೇವೆ. ಯುವಕರೆಲ್ಲ ಗ್ರೂಪ್ನಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ" ಎನ್ನುತ್ತಾರೆ ರಾಜಕುಮಾರ್.
ಚುನಾವಣಾ ಪ್ರಚಾರದಂತೆ ಕಾರ್ಯ
ಯುವಕರಷ್ಟೆ ಅಲ್ಲ ಈ ವ್ಯಾಪ್ತಿಯ ಹಳ್ಳಿ ಹಳ್ಳಿಯ ಪ್ರತಿ ಮನೆಗೂ ತೆರಳಿ ಹಿರಿಯರಿಗೂ ನೆಟ್ವರ್ಕ್ ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಲು ಯೋಜಿಸಲಾಗಿದೆ. ಚುನಾವಣೆ ಪ್ರಚಾರದಂತೆಯೆ ಈ ಕಾರ್ಯವನ್ನು ಮಾಡಲು ಯೋಜನೆ ರೂಪಿಸಲಾಗಿದೆ.
ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾತ್ರವಲ್ಲ, ಶಿವಮೊಗ್ಗ ಜಿಲ್ಲೆಯ ಹಲವು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ತೀರ್ಥಹಳ್ಳಿ, ಸಾಗರ, ಹೊಸನಗರದ ಬಹುಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲವಾಗಿದೆ. ಈಗ ಈ ಅಭಿಯಾನದಿಂದ ರಾಜಕಾರಣಿಗಳಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ.