ಕಾಳಿಂಗ ಸರ್ಪಗಳ ನೆಲೆವೀಡಾದ ಆಗುಂಬೆ, ಅರಣ್ಯ ಪ್ರವೇಶಕ್ಕೆ ನಿಷೇಧ
ಆಗುಂಬೆ ಅರಣ್ಯ ಪ್ರವೇಶಕ್ಕೆ ನಿಷೇಧ ಹೇರಲಾದ ಬಗ್ಗೆ ಅಧಿಕೃತ ಅಧಿಸೂಚನೆ ಹೊರ ಬಿದ್ದಿಲ್ಲದಿದ್ದರೂ, ಅಧಿಕಾರಿಗಳು ಅರಣ್ಯದೊಳಗೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಉಡುಪಿ, ಏಪ್ರಿಲ್ 24: ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಕರೆಯಲ್ಪಡುವ, ಮಳೆಗಾಲದಲ್ಲಿ ಹೆಚ್ಚೆಚ್ಚು ಪ್ರವಾಸಿಗರನ್ನು ಅದರಲ್ಲೂ ಮುಖ್ಯವಾಗಿ ಚಾರಣ ಪ್ರೇಮಿಗಳು ಕೈಬೀಸಿ ಕರೆಯುವ ಆಗುಂಬೆ ಅರಣ್ಯ ಪ್ರದೇಶ ಪ್ರವೇಶಿಸಲು ಅಘೋಷಿತ ನಿಷೇಧ ಹೇರಲಾಗಿದೆ. ಇದಕ್ಕೆ ಕಾರಣ ಆಗುಂಬೆ ಅರಣ್ಯ ಪ್ರದೇಶ ಕಾಳಿಂಗ ಸರ್ಪಗಳ ನೆಲೆವೀಡಾಗಿರುವುದು ಹಾಗೂ ಕಾಡ್ಗಿಚ್ಚಿನ ಭಯ.
ಇಲ್ಲಿ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾದ ಬಗ್ಗೆ ಅಧಿಕೃತ ಅಧಿಸೂಚನೆ ಹೊರ ಬಿದ್ದಿಲ್ಲದಿದ್ದರೂ, ಅಧಿಕಾರಿಗಳು ಅರಣ್ಯದೊಳಗೆ ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶ ನೀಡುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.[ಸಾಗರದಲ್ಲಿ ಭೀಕರ ಅಪಘಾತ: ಐವರ ದುರ್ಮರಣ]
ಆಗುಂಬೆಯಲ್ಲಿ ಎರಡು ಪ್ರವಾಸಿ ತಾಣಗಳಿವೆ. ಒಂದು ಬರ್ಕಾನ ಜಲಪಾತ ಮತ್ತೊಂದು ಜೋಗಿಗುಂಡಿ ಜಲಪಾತ. ಇಲ್ಲಿಗೆ ಬಹಳಷ್ಟು ಪ್ರವಾಸಿಗರು ಆಗಮಿಸುತ್ತಾರೆ. 2015ರಲ್ಲಿ ಮಣಿಪಾಲದ ವಿದ್ಯಾರ್ಥಿಯೊಬ್ಬ ಜೋಗಿಗುಂಡಿಗೆ ಬಿದ್ದು ಮೃತಪಟ್ಟಿದ್ದ. ಬಳಿಕ ಜೋಗಿಗುಂಡಿ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.
ಇದಾದ ಸ್ವಲ್ಪ ಸಮಯದಲ್ಲಿ ಬರ್ಕಾನ ಜಲಪಾತದತ್ತ ಹೋಗುವುದನ್ನೂ ನಿರ್ಬಂಧಿಸಲಾಗಿದೆ ಎಂದು ಆಗುಂಬೆ ಅರಣ್ಯ ವಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.[ವೀಡಿಯೋ ವೈರಲ್, ಬಾಟಲಿಯಿಂದ ನೀರು ಕುಡಿಯುತ್ತಿರುವ ಕಾಳಿಂಗ ಸರ್ಪ]
ಈ ಬಗ್ಗೆ ಅರಣ್ಯಾಧಿಕಾರಿ ಹೇಳುವುದು ಹೀಗೆ. "ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಪ್ರಯಾಣ ಬೆಳೆಸುವುದು ಯಾವತ್ತೂ ಅಪಾಯಕಾರಿಯೇನಲ್ಲ. ನೀವು ತೊಂದರೆ ಮಾಡದಿದ್ದರೆ ನಿಮಗೆ ಹಾವುಗಳು ಕಚ್ಚುವುದಿಲ್ಲ. ಈ ಕಾರಣಕ್ಕಾಗಿ ನಿಷೇಧ ಹೇರಬೇಕಾಗಿಲ್ಲ. ಆದರೆ ಅರಣ್ಯ ಪ್ರದೇಶದಲ್ಲಿ ಜನರು ತಿರುಗಾಡುತ್ತಿದ್ದರೆ ಅಗ್ನಿ ದುರಂತಗಳು ನಡೆಯುವ ಸಂಭವವಿದೆ. ಹಾಗಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ," ಎಂದವರು ಉತ್ತರಿಸಿದ್ದಾರೆ.
ಹೀಗೆ ಅಪೂರ್ವ ಚಾರಣದ ಅನುಭವ ನೀಡುತ್ತಿದ್ದ ಆಗುಂಬೆಯ ಬಾಗಿಲು ಪ್ರವಾಸಿಗರ ಪಾಲಿಗೆ ಮುಚ್ಚಿದೆ.