ನೀರಿಗಾಗಿ ಯುದ್ಧ ನಡೆಯುವ ದಿನಗಳು ಬರಬಹುದು : ಡಿ.ಸಿ.ತಮ್ಮಣ್ಣ
Recommended Video
ಶಿವಮೊಗ್ಗ, ಜೂನ್ 11 : 'ಕೆರೆ-ಕಟ್ಟೆಗಳು ಜನರ ಜೀವನಾಡಿ. ಗ್ರಾಮೀಣರು ಅವುಗಳನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಂಡಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಅಲ್ಲದೇ ಎಲ್ಲ ಕಾಲದಲ್ಲೂ ನೀರು ಬಳಕೆಗೆ ದೊರೆಯಲಿದೆ' ಎಂದು ಸಾರಿಗೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಮಂಗಳವಾರ ಅವರು ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ 'ಸ್ವಚ್ಛ ಮೇವ ಜಯತೇ' ಮತ್ತು 'ಜಲಾಮೃತ' ಮಾಸಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ
'ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಆರೋಗ್ಯ ರಕ್ಷಣೆ, ಜಲ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿದೆ. ಇದು ಗ್ರಾಮೀಣ ಪರಿಸರದ ಕುರಿತು ಜನರಲ್ಲಿ ಅರಿವು ಮೂಡಿಸಲಿದೆ. ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಯಾವುದೇ ಅರಿವಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಹಾಗೂ ಸದ್ಭಳಕೆ ಕುರಿತು ಯುದ್ಧಗಳೇ ನಡೆದರೆ ಆಶ್ಚರ್ಯವಿಲ್ಲ' ಎಂದರು.
ಮಳೆಗೆ ಬಿರುಕುಬಿಟ್ಟ ಕುಕ್ಕರಹಳ್ಳಿ ಕೆರೆ ಏರಿ, ವಾಯುವಿಹಾರಿಗಳಲ್ಲಿ ಆತಂಕ
'ನೂರಾರು ಅಡಿ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇದರ ಕಾರಣಗಳ ಬಗ್ಗೆ ಗಮನಹರಿಸುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಭೂಮಿಯ ಒಡಲು ಬರಿದಾಗುತ್ತಿದೆ. ಕಾಲಕಾಲಕ್ಕೆ ಮಳೆ ಬರುತ್ತಿಲ್ಲ. ನಗರೀಕರಣದಿಂದಾಗಿ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಪರಿಸರವನ್ನು ಉಳಿಸಿಕೊಂಡು ಮುಂದಿನ ತಲೆಮಾರಿನ ಪೀಳಿಗೆಗೆ ಉಳಿಸಿಕೊಳ್ಳುವ ಅಗತ್ಯವಿದೆ' ಎಂದು ಹೇಳಿದರು.
ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಕೆರೆಗಳ ಸಂರಕ್ಷಣೆ: ಕುಮಾರಸ್ವಾಮಿ
'ಬಾಹ್ಯ ಹಾಗೂ ಆಂತರಿಕ ಸ್ಚಚ್ಚತೆಗೆ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದನ್ನೇ ಮರೆತಿದ್ದೇವೆ. ಸರಳವಾಗಿ ದೊರೆಯಬಹುದಾದ ನೀರನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು' ಎಂದು ಕರೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, 'ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಗೂ ವಿದ್ಯುತ್ನ್ನು ಮಿತವಾಗಿ ಬಳಸುವುದು ಕೂಡ ಒಂದು ರೀತಿಯ ದೇಶಸೇವೆಯೆ ಆಗಿದೆ. ಪರಿಸರದ ಮೇಲಿನ ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಅಸಮತೋಲ ಉಂಟಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಡಾ.ಎಸ್.ರಂಗಸ್ವಾಮಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.