ಮಳೆ ಆರ್ಭಟಕ್ಕೆ ಕೆರೆಯಂತಾದ ನವುಲೆ ಕ್ರಿಕೆಟ್ ಸ್ಟೇಡಿಯಂ
ಶಿವಮೊಗ್ಗ, ಜುಲೈ 24: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳು ಕೆರೆಯಾಗಿ ಮಾರ್ಪಟ್ಟಿವೆ.
ಶಿವಮೊಗ್ಗದ ನವುಲೆಯಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊಣಕಾಲುದ್ದ ನೀರು ನಿಂತಿದ್ದು, ಪಿಚ್ ಸಂಪೂರ್ಣ ಹಾನಿಗೊಳಗಾಗಿದೆ.
ವರುಣನ ಆರ್ಭಟ: ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಜಾಸ್ತಿಯಾಗಿದ್ದು, ಶಿವಮೊಗ್ಗದ ನವುಲೆಯಲ್ಲಿನ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಮುಳುಗಿದೆ. ಪಿಚ್ನ ಒಳಗೆ ಕಾಲಿಡುವುದು ಸಹ ಕಷ್ಟವಾಗಿದ್ದು, ಪ್ರಾಕ್ಟೀಸ್ ಅಂಕಣವು ಜಲಾವೃತವಾಗಿದೆ.
ಕ್ರಿಕೆಟ್ ಸ್ಟೇಡಿಯಂನಲ್ಲಿ ನಿಂತಿರುವ ನೀರನ್ನು ಹೊರಹಾಯಿಸಿ, ಪುನಃ ಅಂಗಣವನ್ನು ಸಿದ್ಧಪಡಿಸಬೇಕಿದೆ. ಜೋರು ಮಳೆಯಾದಾಗಲೆಲ್ಲ ಇಲ್ಲಿ ಇದೇ ಪರಿಸ್ಥಿತಿ ಪುನರಾವರ್ತನೆಯಾಗಲಿದೆ.
ಶಿವಮೊಗ್ಗದಲ್ಲಿ ಜೋರು ಮಳೆಯಾದಾಗಲೆಲ್ಲ ನವುಲೆಯ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತವಾಗುತ್ತದೆ. ಇದರಿಂದ ಪ್ರತಿ ಮಳೆಗಾಲದ ಬಳಿಕ ಪಿಚ್ ರಿಪೇರಿ ಕಾರ್ಯ ನಡೆಸುವುದು ಅನಿವಾರ್ಯವಾಗಿದೆ.
ಕೆರೆ ಜಾಗದಲ್ಲಿ ಸ್ಟೇಡಿಯಂ
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕಾಗಿ ನವುಲೆ ಕೆರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. 26 ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗಿದೆ. ಕರೆ ಜಾಗ ಮತ್ತು ತಗ್ಗು ಪ್ರದೇಶ ಆಗಿರುವುದರಿಂದ ಮಳೆ ಶುರುವಾದರೆ ಸ್ಟೇಡಿಯಂ ಕೆರೆಯಾಗಿ ರೂಪಾಂತರಗೊಳ್ಳಲಿದೆ.