ಆಪರೇಷನ್ ಮೂಲಕವೇ ಯಡಿಯೂರಪ್ಪ ರಾಜಕೀಯ ಪ್ರವೇಶ: ನಾಗರಾಜ್ ಗೌಡ
ಶಿವಮೊಗ್ಗ, ನವೆಂಬರ್ 3: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಈ ಹಿಂದೆ ಪುರಸಭಾ ಸದಸ್ಯರಾಗಿದ್ದಾಗ, ಅಧ್ಯಕ್ಷ ಸ್ಥಾನ ಪಡೆಯಲು ಆಗಿನ ಪುರಸಭಾ ಸದಸ್ಯ ಯಲ್ಲಪ್ಪ ಎಂಬ ಸದಸ್ಯರಿಗೆ ಹಣದ ಆಮಿಷ ತೋರಿಸಿ ತಮ್ಮ ಪರ ಮತ ಚಲಾಯಿಸಲು ಪ್ರೇರೇಪಿಸಿದ್ದರು ಎಂದು ಪುರಸಭಾ ಕಾಂಗ್ರೆಸ್ ಸದಸ್ಯ ನಾಗರಾಜ್ ಗೌಡ ಆರೋಪಿಸಿದರು.
ಶಿಕಾರಿಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ""ಮುಂದೆ ಅದೇ ರೀತಿಯಲ್ಲಿ ಮುಂದುವರಿದ ಯಡಿಯೂರಪ್ಪ, ಮುಖ್ಯಮಂತ್ರಿ ಹುದ್ದೆಗೆ ಏರಲು ವಿರೋಧ ಪಕ್ಷಗಳ ವಿಧಾನಸಭಾ ಸದಸ್ಯರಿಗೆ ಹಣ ಹಾಗೂ ಅಧಿಕಾರಿಗಳ ಆಸೆಯನ್ನು ತೋರಿಸಿ ವಾಮ ಮಾರ್ಗದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ: ಶಿಕಾರಿಪುರ ಪುರಸಭಾ ಕಾಂಗ್ರೆಸ್ ಸದಸ್ಯೆ ರಾಜೀನಾಮೆ, ಬಿಜೆಪಿ ಸೇರ್ಪಡೆ
ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ಕೂಡ ಅದೇ ವಾಮ ಮಾರ್ಗದಲ್ಲಿ ಪುರಸಭಾ ಆಡಳಿತದ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಪುರಸಭಾ ಸದಸ್ಯ ನಾಗರಾಜ್ ಗೌಡ ಹೇಳಿದರು.
ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿದೆ
ಶಿಕಾರಿಪುರ ಪಟ್ಟಣದ ಜನತೆ ಬಿಜೆಪಿಯ ದುರಾಡಳಿತವನ್ನು ಕಂಡು ಬೇಸತ್ತು ಅವರನ್ನು ವಿರೋಧಿಸಿದರೂ, ಮತ್ತೆ ಪುರಸಭಾ ಅಧಿಕಾರವನ್ನು ನಡೆಸಲು ಮುಂದಾಗಿದ್ದಾರೆ ಇದು ಜನತೆಗೆ ಮಾಡುತ್ತಿರುವ ಮೋಸವಾಗಿದೆ. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಪಟ್ಟಣದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ವಾರ್ಡ್ ನ ಜನರು ಬಿಜೆಪಿಯ ಮುಖಂಡರಲ್ಲಿ ಯಾವುದಾದರೂ ಕೆಲಸ ಕಾರ್ಯಗಳಿಗೆ ಹೋದರೆ ನೀವು ನಮ್ಮ ಪಕ್ಷಕ್ಕೆ ಓಟು ಹಾಕಿಲ್ಲ, ಆದ್ದರಿಂದ ಯಾವುದೇ ರೀತಿಯ ಅಭಿವೃದ್ಧಿ ನಡೆಸಲು ಸಾಧ್ಯವಿಲ್ಲ ಎಂದು ಉತ್ತರಿಸಿ ಕಳಿಸಿರುತ್ತಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ 12 ಜನ ಸದಸ್ಯರ ಆಯ್ಕೆ
ಹುಲ್ಮಾರ್ ಮಹೇಶ್ ಮಾತನಾಡಿ, ಪಟ್ಟಣದ ಮತದಾರರು ಕಳೆದ 25 ವರ್ಷಗಳಿಂದ ಬಿಜೆಪಿಯವರ ದಬ್ಬಾಳಿಕೆಯ ದುರಾಡಳಿತವನ್ನು ಖಂಡಿಸಿ, ಇದೇ ಮೊದಲ ಬಾರಿಗೆ ಪುರಸಭೆಗೆ ಕಾಂಗ್ರೆಸ್ ಪಕ್ಷದ 12 ಜನ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ನಿಚ್ಚಳ ಬಹುಮತದಿಂದ ಪುರಸಭೆಯಲ್ಲಿ ಉತ್ತಮ ಆಡಳಿತವನ್ನು ನಡೆಸಲು ಅನುಮತಿ ನೀಡಿದ್ದಾರೆ.
ಕೇವಲ 8 ಜನ ಬಿಜೆಪಿ ಸದಸ್ಯರನ್ನು, 3 ಜನ ಪಕ್ಷೇತರರಿಗೆ ಆಯ್ಕೆ ಮಾಡಿದ ಜನತೆ, ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂರುವಂತೆ ಆದೇಶ ನೀಡಲಾಗಿತ್ತು.
ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರೂ ಕೂಡ ಜನಾದೇಶಕ್ಕೆ ಮಣಿದು, ಈ ಬಾರಿಯ ಅವಧಿಯನ್ನು ಕಾಂಗ್ರೆಸ್ ಪಕ್ಷದವರೇ ನಡೆಸಲಿ ಎಂದು ತಿಳಿಸಿದ್ದರು. ಆದರೆ ಸಂಸದರು ಹಾಗೂ ಬಿಜೆಪಿಯ ಕೆಲ ಮುಖಂಡರಿಂದ ಮತ್ತೆ ಪುರಸಭಾ ಅಧಿಕಾರವನ್ನು ನಡೆಸಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡದೇ, ವೈಮಾನಿಕ ಸಮೀಕ್ಷೆ ನಡೆಸಿರುವ ಬಿ.ಎಸ್ ಯಡಿಯೂರಪ್ಪರವರು ಇದುವರೆಗೂ ಅಲ್ಲಿನ ಜನತೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ಅನ್ನ ನೀಡದೇ ಇದ್ದಿದ್ದರೆ ಈಗ ಅಲ್ಲಿನ ಜನರ ಪರಿಸ್ಥಿತಿ ಹೇಳತೀರದಂತಾಗುತ್ತಿತ್ತು.
ಜನ ಅವರಿಗೆ ಛೀಮಾರಿ ಹಾಕುತ್ತಾರೆ
ನಮ್ಮ ಪಕ್ಕದಿಂದ ಗೆದ್ದ ಸದಸ್ಯರಿಗೆ ಹಣ ಮತ್ತು ಅಧಿಕಾರದ ಆಸೆಯನ್ನು ತೋರಿಸಿ ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಪುರಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದವರಿಗೆನೇ ಮತ್ತೆ ಅದೇ ವಾರ್ಡ್ ಗಳಲ್ಲಿ ಬಿ ಫಾರಂ ಕೊಟ್ಟು ಕಣಕ್ಕೆ ಇಳಿಸಲಿ ಜನ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್, ಪುರಸಭಾ ಸದಸ್ಯರಾದ ಗೋಣಿ ಪ್ರಕಾಶ್, ಶಕುಂತಲಾ, ಜಯಶ್ರೀ, ಕಮಲಮ್ಮ, ಮುಖಂಡರಾದ ಮಾರವಳ್ಳಿ ಉಮೇಶ್ ವಿಜಯ್, ರಾಜು ಮಂಜುನಾಥ್ ಇದ್ದರು.