"ಕುಮಾರಸ್ವಾಮಿ ಈಗ ವಿಲವಿಲ ಒದ್ದಾಡುತ್ತಿದ್ದಾರೆ"
ಶಿವಮೊಗ್ಗ, ಫೆಬ್ರವರಿ 09: "ಅಧಿಕಾರ ಕಳೆದುಕೊಂಡ ಮೇಲೆ ಕುಮಾರಸ್ವಾಮಿ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಅಧಿಕಾರ ಹೋಗಿದ್ದಕ್ಕೆ ಕುಮಾರಸ್ವಾಮಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಅವರ ಮನಸ್ಥಿತಿ ಸರಿಯಿಲ್ಲ, ಹೀಗಾಗಿ ಹುಚ್ಚು ಹುಚ್ಚಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು, ಬಿಜೆಪಿ ಸರ್ಕಾರ ಹೆಚ್ಚು ದಿನ ಇರಲ್ಲ ಎಂಬ ಎಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
ಜಿಲ್ಲೆಯ ಶಿಕಾರಿಪುರ ಪಟ್ಟಣ ಸಿಎಂ ಬಿ.ಎಸ್ ವೈ ಸ್ವಗೃಹಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ, ಎಂ.ಪಿ. ರೇಣುಕಾಚಾರ್ಯ, "ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರೇ ಹಗಲು ಕನಸು ಕಾಣಬೇಡಿ. ಸರ್ಕಾರ ಪತನ ಆಗಲ್ಲ. ಯಡಿಯೂರಪ್ಪ ಕಲ್ಲುಬಂಡೆಯ ರೀತಿ. ಮುಂದಿನ ಮೂರೂವರೆ ವರ್ಷ ಇದೇ ಸರ್ಕಾರವಿರುತ್ತದೆ ಮಾತ್ರವಲ್ಲ, 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಇದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ" ಎಂದರು.
ಸಂಪುಟ ವಿಸ್ತರಣೆಯ ಬೆನ್ನಲ್ಲೇ ರೇಣುಕಾಚಾರ್ಯ ಮಾಡಿದ ಶಪಥ
"ನಾನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರಣ. ನಾನು ಸಚಿವ ಸ್ಥಾನ ಆಕಾಂಕ್ಷಿ ಅಂತ ನಿಮ್ಮ ಮುಂದೆ ಹೇಳಿದರೆ ಪ್ರಯೋಜನ ಇಲ್ಲ. ಬಿಎಸ್ ವೈ ನಮ್ಮ ತಂದೆ ಇದ್ದಂತೆ" ಎಂದರು. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಬೇಕು ಎಂಬುದು ಜಿಲ್ಲೆಯ ಜನರ ಆಕಾಂಕ್ಷೆ. ಇದಕ್ಕೆ ನಾನು ಯಾವುದೇ ಒತ್ತಡ, ಬೇಡಿಕೆ ಇಟ್ಟಿಲ್ಲ. 15 ಜನ ಶಾಸಕರು ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. 10 ಜನಕ್ಕೆ ಈಗಾಗಲೇ ಸಚಿವ ಸ್ಥಾನ ನೀಡಲಾಗಿದೆ. ಸಿಎಂ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವೆಲ್ಲ ಬದ್ಧ" ಎಂದರು.