"ನಾವು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ, ರೈಲ್ವೆ ಟರ್ಮಿನಲ್ ಮಾಡುತ್ತಿದ್ದೇವೆ"
ಶಿವಮೊಗ್ಗ, ಡಿಸೆಂಬರ್ 2: ರೈಲ್ವೆ ಟರ್ಮಿನಲ್ ವಿಷಯದಲ್ಲಿ ವಿಪಕ್ಷ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುತ್ತಿದ್ದು, ನಾವು ರಿಯಲ್ ಎಸ್ಟೇಟ್ ಮಾಡುತ್ತಿಲ್ಲ, ರೈಲ್ವೆ ಟರ್ಮಿನಲ್ ಮಾಡುತ್ತಿದ್ದೇವೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಕಾಂಗ್ರೆಸ್ ನಾಯಕ ತೀನಾ ಶ್ರೀನಿವಾಸ್ ಗೆ ತಿರುಗೇಟು ನೀಡಿದರು.
ಬ್ರಾಡ್ ಗೇಜ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಮಾತ್ರ ಬ್ರಾಡ್ ಗೇಜ್ ಆಗಿತ್ತು. ಆದರೆ 220 ಕೋಟಿ ರುಪಾಯಿ ವೆಚ್ಚದಲ್ಲಿ ಶಿವಮೊಗ್ಗದಿಂದ ತಾಳಗುಪ್ಪದವರೆಗೆ ಬ್ರಾಡ್ ಗೇಜ್ ಮಾಡಲಾಯಿತು. ಇದು ಬಿಜೆಪಿ ಕಾಲದಲ್ಲಿ ನಡೆದಿದ್ದು ಎಂಬುದನ್ನು ನಮ್ಮ ಮೇಲೆ ಆರೋಪ ಮಾಡುವವರು ಗಮನಿಸಬೇಕು ಎಂದರು.
ಶಿವಮೊಗ್ಗ ಜಿಲ್ಲೆಗೊಂದು ಹೊಸ ತಾಲೂಕು; ಸಿಎಂಗೆ ಬೇಡಿಕೆ
ರೈಲ್ವೆ ಇಲಾಖೆಯೇ ಎರಡು ಸ್ಥಳವನ್ನು ಗುರುತಿಸಿತ್ತು. ಒಂದು ತಾಳಗುಪ್ಪ ಇನ್ನೊಂದು ಕೋಟೆ ಗಂಗೂರನ್ನು ಗುರುತಿಸಿದೆ. ಜಿಲ್ಲಾ ಕೇಂದ್ರದ ಹತ್ತಿರ ಇರುವ ಕೋಟೆ ಗಂಗೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೈಲ್ವೆ ಟರ್ಮಿನಲ್ ಕೇವಲ ತಾಲೂಕು ಮತ್ತು ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ರೈಲ್ವೆ ಸಂಚಾರದ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ಕಾಂಗ್ರೆಸ್ ನಾಯಕರ ಆರೋಪದಂತೆ ಏನೂ ನಡೆದಿಲ್ಲ. ಅದು ಅವರ ಕೇವಲ ಆರೋಪವೆಂದು ಹೇಳಿದರು.