ಬೆಂಗಳೂರಿಗೆ ಲಿಂಗನಮಕ್ಕಿ ನೀರು ಕೊಂಡೊಯ್ಯಲು ಬಿಡೊಲ್ಲ: ರಾಘವೇಂದ್ರ
ಶಿವಮೊಗ್ಗ, ಜೂನ್ 22: ಬೆಂಗಳೂರಿಗರ ಕುಡಿಯುವ ನೀರಿನ ಸಮಸ್ಯೆ ತಣಿಸಲು ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸುಮಾರು 300 ಕಿ.ಮೀ. ದೂರದ ಲಿಂಗನಮಕ್ಕಿಯಿಂದ ಅಂದಾಜು 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೀರು ತರಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ಡಿಪಿಆರ್ ಸಿದ್ಧಪಡಿಸುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
ಮಲೆನಾಡಿನ ಭಾಗಗಳಲ್ಲಿಯೇ ಸರಿಯಾಗಿ ಮಳೆಯಾಗುತ್ತಿಲ್ಲ. ಅಲ್ಲದೆ, ಇಲ್ಲಿನ ಅನೇಕ ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದೆ. ರೈತರ ಬೆಳೆಗಳಿಗೆ ನೀರು ಸಾಲುತ್ತಿಲ್ಲ. ಹೀಗಿರುವಾಗ ಬೆಳೆಯುತ್ತಿರುವ ದೂರ ಬೆಂಗಳೂರಿಗೆ ಏಕೆ ನೀರು ಕೊಡಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ಉದ್ಧಾರವಾದರೆ ರಾಜ್ಯವೇ ಉದ್ಧಾರವಾದಂತೆ ಎಂದು ಸರ್ಕಾರ ಭಾವಿಸಿರುವಂತಿದೆ ಎಂಬುದಾಗಿ ಸಂಸದ ಬಿವೈ ರಾಘವೇಂದ್ರ ಯೋಜನೆ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ವೇಳೆ ಜಮೀನು ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ನೀಡಿಲ್ಲ. ಈಗ ಇಲ್ಲಿಂದ ನೀರು ಕೊಂಡೊಯ್ಯಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ : ನೀರಿನ ಕೊರತೆ, ನಗರದಲ್ಲಿ ಜೂ.10ರಿಂದ 2 ದಿನಕ್ಕೊಮ್ಮೆ ನೀರು
ಬೆಂಗಳೂರಿನಲ್ಲಿ ಮಳೆಯಾದರೂ ನೀರು ಸಂಗ್ರಹಿಸುವ ವ್ಯವಸ್ಥೆಯಿಲ್ಲ. ಅಲ್ಲಿ ಮಳೆ ನೀರು ಕೊಯ್ಲು ಮತ್ತು ಕೆರೆ ಒತ್ತುವರಿ ತೆರವು ಮಾಡುವುದರತ್ತ ಸರ್ಕಾರ ಗಮನ ಹರಿಸಿಲ್ಲ. ಈ ಕ್ರಮಗಳನ್ನು ತೆಗೆದುಕೊಂಡರೆ ಅಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.
ಲಿಂಗನಮಕ್ಕಿ ಜಲಾಶಯ ನಿರ್ಮಿಸಿದ್ದು ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ. ಇಲ್ಲಿಂದ ಬೆಂಗಳೂರಿಗೆ ಕುಡಿಯುವ ನೀರು ಸಾಗಿಸಿದರೆ ವಿದ್ಯುತ್ ಉತ್ಪಾದನೆ ಮಾಡುವುದು ಹೇಗೆ? ಬೆಂಗಳೂರಿಗೆ ನೀರು ಪಂಪ್ ಮಾಡಿ ಕಳುಹಿಸಲೂ ವಿದ್ಯುತ್ ಇರುವುದಿಲ್ಲ. ಈ ಯೋಜನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಾಶ ಉಂಟಾಗಲಿದೆ. ಹೀಗಾಗಿ ಈ ಯೋಜನೆಗೆ ತಮ್ಮ ವಿರೋಧವಿದೆ ಎಂದಿದ್ದಾರೆ.
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರಗಾಲದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.