ಕಲ್ಲೊಡ್ಡು ಬದಲು ಪರ್ಯಾಯ ನೀರಾವರಿ ಯೋಜನೆ: ಬಿ.ವೈ ರಾಘವೇಂದ್ರ
ಶಿವಮೊಗ್ಗ, ಜೂನ್ 23: ಶಿಕಾರಿಪುರ ತಾಲೂಕಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕಲ್ಲೊಡ್ಡು ಯೋಜನೆಗೆ ಸಾಗರ ತಾಲೂಕಿನ ರೈತರ ವಿರೋಧದ ಹಿನ್ನೆಲೆಯಲ್ಲಿ ಪರ್ಯಾಯ ಯೋಜನೆ ಕುರಿತು ಸಂಸದ ಬಿ.ವೈ.ರಾಘವೇಂದ್ರ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಸಾಗರ ತಾಲೂಕು ಕುಂದೂರು ಸಮೀಪ ಸಣ್ಣ ಡ್ಯಾಂ ನಿರ್ಮಿಸಿ ನೀರು ನಿಲ್ಲಿಸುವ ಪ್ರಸ್ತಾವನೆ ಕಲ್ಲೊಡ್ಡು ಯೋಜನೆಯಲ್ಲಿ ಇತ್ತು, ಅದರಿಂದಾಗಿ 130 ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತದೆ. ಜೊತೆಗೆ 2750 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಕಲ್ಪಿಸಲಾಗುತ್ತಿತ್ತು. ಇದೀಗ ಹೊಸ ಯೋಜನೆಯಲ್ಲಿ, ಮಲ್ಲಾಪುರ ಕೆರೆಗೆ ಮಳೆಗಾಲದಲ್ಲಿ ಹರಿದು ಬರುವ ನೀರು ಸಂಗ್ರಹಿಸಿ ಏತ ನೀರಾವರಿ ಮೂಲಕ 3100 ಹೆಕ್ಟೇರ್ ಕೃಷಿಭೂಮಿಗೆ ನೀರು ಒದಗಿಸುವ ಉದ್ದೇಶವಿದೆ.
ಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶ
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ಕಲ್ಲೊಡ್ಡು ಯೋಜನೆ ಜಾರಿಗೊಳಿಸುವುದಕ್ಕೆ ಸಾಗರ ತಾಲೂಕಿನ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪರ್ಯಾಯ ಚಿಂತನೆ ನಡೆಸಲಾಗುತ್ತಿದ್ದು, ಇದೀಗ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಕಲ್ಲೊಡ್ಡು ಯೋಜನೆಗಿಂತಲೂ ಕಡಿಮೆ ಖರ್ಚಿನಲ್ಲಿ, ಹೆಚ್ಚು ಕೃಷಿಭೂಮಿಗೆ ನೀರು ಒದಗಿಸುವ ಉದ್ದೇಶ ಹೊಸ ಯೋಜನೆಯಲ್ಲಿ ಈಡೇರಲಿದೆ. ರೈತರ ಯಾವುದೇ ಭೂಮಿ ಮುಳುಗಡೆ ಆಗದೆ ರೈತರಿಗೆ ಅನುಕೂಲ ಕಲ್ಪಿಸುವ ಈ ಯೋಜನೆ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ತಿಳಿಸಿದರು.
ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಪ್ರಶಾಂತ್ ಮಾತನಾಡಿ, ಮಲ್ಲಾಪುರ ಕೆರೆ 56 ಎಕರೆಯಷ್ಟು ವಿಸ್ತೀರ್ಣವಿದೆ. ಉಳಿದ ಕೆರೆಗಳಿಗೆ ಹೋಲಿಸಿದಲ್ಲಿ ಹೆಚ್ಚು ಆಳವಿದ್ದು, ಕಲ್ಲೊಡ್ಡು ಯೋಜನೆಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಇದೆ. ಉಳಿದ ಏತ ನೀರಾವರಿ ಯೋಜನೆಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಎತ್ತರಕ್ಕೆ ನೀರು ಲಿಫ್ಟ್ ಮಾಡಬೇಕಾಗುತ್ತದೆ, ನೀರು ಚಿಟ್ಟೂರು ಕೆರೆವರೆಗೂ ತಲುಪುವ ಮೂಲಕ ಈ ಭಾಗದ ಎಲ್ಲ ಕೆರೆ ತುಂಬಿಸಲಾಗುವುದು. ಗುಡ್ಡದ ನೀರು ಹರಿಯುವ ಪ್ರದೇಶದಲ್ಲಿ ನಾಲೆ ನಿರ್ಮಿಸುವ ಕಾರಣಕ್ಕೆ ಅಲ್ಲಿಯೂ ಕಡಿಮೆ ರೈತರ ಭೂಮಿ ಪಡೆದು ನೀರಾವರಿ ಕಲ್ಪಿಸಲಾಗುತ್ತದೆ, ಮಳೆಗಾಲ ಮುಗಿದ ನಂತರ ನಾಲೆ ಜಾಗ ಸರ್ವೆ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವಿರೇಂದ್ರ ಪಾಟೀಲ್, ಎಂಐಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಮೋಹನ್, ಪರಶುರಾಮ್ ಮತ್ತಿತರರು ಇದ್ದರು.