ಶಿವಮೊಗ್ಗದಲ್ಲಿ ಲಾಕ್ ಡೌನ್ ನಡುವೆಯೂ ತಿಥಿಗೆ ಸೇರಿದ್ರು ನೂರಾರು ಜನ!
ಶಿವಮೊಗ್ಗ, ಏಪ್ರಿಲ್ 01: ಕೊರೊನಾ ನಿರ್ಮೂಲನೆಗಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಮನೆಯಿಂದ ಯಾರೂ ಹೊರಬರದಂತೆ ನಿಷೇಧವನ್ನೂ ಹೇರಲಾಗಿದೆ. ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು, ಹೆಚ್ಚು ಮಂದಿ ಒಂದೆಡೆ ಸೇರಲೇಬಾರದು ಎಂಬ ನಿಯಮವನ್ನೂ ಹಾಕಲಾಗಿದೆ. ಆದರೆ ಈ ಎಲ್ಲಾ ನಿಯಮಗಳ ನಡುವೆಯೂ ಶಿವಮೊಗ್ಗದಲ್ಲಿ ಸುಮಾರು ನೂರೈವತ್ತು ಮಂದಿ ಸೇರಿ ತಿಥಿ ಕಾರ್ಯಕ್ಕೆ ಸೇರಿದ್ದಾರೆ.
ಲಾಕ್ ಡೌನ್: ದಾವಣಗೆರೆಯಲ್ಲಿ 80ಕ್ಕೂ ಹೆಚ್ಚು ವಾಹನಗಳ ವಶ
ಶಿವಮೊಗ್ಗ ನಗರದ ತುಂಗಾ ನದಿಯ ಕೋರ್ಪಲಯ್ಯನ ಛತ್ರದ ಬಳಿ ಅಶೋಕ ನಗರದ ಕೆಲವು ಕುಟುಂಬದವರು ಸೇರಿಕೊಂಡು ಸಾಮೂಹಿಕ ತಿಥಿ ಕಾರ್ಯವನ್ನು ನಡೆಸಿದ್ದಾರೆ. ಈ ತಿಥಿ ಕಾರ್ಯದಲ್ಲಿ ಸುಮಾರು ನೂರೈವತ್ತು ಮಂದಿ ಭಾಗವಹಿಸಿದ್ದಾರೆ. ಜನ ಸೇರಿದ್ದ ವಿಷಯ ತಿಳಿಯುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಬರುತ್ತಿದ್ದುದನ್ನು ನೋಡಿ ತಿಥಿಗೆ ಸೇರಿದ್ದ ಜನರೂ ಚದುರಿ ಓಡಿದ್ದಾರೆ.
ಕೋರ್ಪಲಯ್ಯನ ಛತ್ರದ ಬಳಿ ಇತ್ತೀಚೆಗೆ ಮೃತಪಟ್ಟ ಮೂವರ ಸಾಮೂಹಿಕ ತಿಥಿ ಕಾರ್ಯವನ್ನು ಕುಟುಂಬದವರು, ನೂರಾರು ಬಂಧು ಮಿತ್ರರ ಸಮೇತ ನೆರವೇರಿಸುತ್ತಿದ್ದರು. ಲಾಕ್ ಡೌನ್ ಹಾಗೂ ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸರು ಜನರನ್ನು ಓಡಿಸಿದ್ದಾರೆ. ಬಳಿಕ ಒಂದಿಬ್ಬರು ಸೇರಿ ತಿಥಿ ಕಾರ್ಯ ನಡೆಸಿದ್ದಾರೆ.