ಶಿವಮೊಗ್ಗದಲ್ಲಿ ನಕಲಿ ಪೊಲೀಸ್ ಸಿಬ್ಬಂದಿಯಿಂದ ಹಣ ವಸೂಲಿ
ಶಿವಮೊಗ್ಗ, ಏಪ್ರಿಲ್ 21: ಕೊರೊನಾ ವೈರಸ್ ವಿರುದ್ಧ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಜನರನ್ನು ಹೆದರಿಸಿ ನಕಲಿ ಪೊಲೀಸ್ ಹಾಗೂ ನಕಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದ ಶಿವಮೊಗ್ಗದಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ ತಾಲ್ಲೂಕಿನ ಗ್ರಾಮೀಣ ಜನರಿಂದ ಖದೀಮರು ಹಣ ವಸೂಲಿ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೆ ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಮಾಸ್ಕ್ ಧರಿಸಿಲ್ಲ, ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.
ಶಿವಮೊಗ್ಗ ಟಿಪ್ಪು ನಗರದ ವಾಸಿ ಹಾಗೂ ಅಲಿ ಎಂಬುವರಿಂದ ಕೃತ್ಯ ನಡೆದಿದೆ. ಇವರೇ ಶಿವಮೊಗ್ಗ ತಾಲ್ಲೂಕು ಕುಂಸಿ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಜನರನ್ನು ಹೆದರಿಸಿ ಹಣ ವಸೂಲಿ ಮಾಡಿರುವ ಆರೋಪಿಗಳು.
ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಗ್ರಾಮದಲ್ಲಿ ಜನರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿರುವಾಗ ಅನುಮಾನಗೊಂಡ ಸ್ಥಳೀಯರಿಂದ ವಿಚಾರಣೆ ಮಾಡಲಾಯಿತು. ಆಗ ಈ ಇಬ್ಬರು ಆರೋಪಿಗಳು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಇಬ್ಬರಿಗೂ ಧರ್ಮದೇಟು ನೀಡಿ ಕುಂಸಿ ಠಾಣೆ ಪೊಲೀಸರಿಗೆ ಒಪ್ಪಿಸಿದರು. ಆರೋಪಿಗಳನ್ನು ಕುಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.