ಶಿವಮೊಗ್ಗ: ಇಂದಿನ ತೀರ್ಪು ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ
ಶಿವಮೊಗ್ಗ, ಸೆಪ್ಟೆಂಬರ್ 30: ಅಯೋಧ್ಯೆಯ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 32 ಜನರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಇದು ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿಯಾಗಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾವುದೋ ದೇಶದಿಂದ ಬಂದ ಬಾಬರ್ ರಾಮ ಮಂದಿರ ಕೆಡವಿ ಮಸೀದಿ ನಿರ್ಮಾಣವಾದಾಗ ಗುಲಾಮರ ಸಂಕೇತದಂತೆ ನಮ್ಮನ್ನು ಕೆಣಕುತ್ತಿತ್ತು. ಆದರೆ ಈ ತೀರ್ಪು ನೀನು ಗುಲಾಮನಲ್ಲವೆಂದು ನೀಡಿದೆ ಎಂದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ನಾಯಕರ ಪ್ರತಿಕ್ರಿಯೆ
ಬಾಬರಿ ಮಸೀದಿ ಪ್ರಕರಣದ ಹೋರಾಟದಲ್ಲಿದ್ದ 32 ಜನರಿಗೆ ಕೋರ್ಟ್ ಖುಲಾಸೆ ಮಾಡಿರುವುದು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನವಾಗಿದೆ. ಸ್ವತಂತ್ರ ಭಾರತದಲ್ಲಿ ನಮ್ಮ ಶ್ರದ್ಧಾ ಮಂದಿರಗಳ ಪರ ಹೋರಾಟ ಮಾಡಲು ಇಂದಿನ ತೀರ್ಪು ಸ್ಫೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಮಸೀದಿ ಕೆಡವಿ ರಾಮಮಂದಿರ ಕಟ್ಟಬೇಕು ಎಂಬುದು ರಾಷ್ಟ್ರೀಯವಾದಿಗಳ ತೀರ್ಮಾನವಾಗಿತ್ತು. ಈ ತೀರ್ಪು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಾಗಿಲ್ಲ. ಮಥುರಾದಲ್ಲಿಯೂ ಶ್ರೀಕೃಷ್ಣನ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ.
ಇಲ್ಲಿಯೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆಯಾಗಿದೆ. ಅಡ್ವಾಣಿ ಅವರಿಗೆ ಶಿಕ್ಷೆಯಾಗಿದ್ದರೆ ಈ ವಯಸ್ಸಿನಲ್ಲಿ ಏನು ಕಥೆ? ಎಂದು ಕೆಲವರು ಹೇಳುತ್ತಿದ್ದರು ಎಂದರು.
ಆದರೆ ಅವರು ರಾಮನಿಗಾಗಿ ಶಿಕ್ಷೆಗೆ ಸಿದ್ಧರಾಗಿದ್ದರು ಎಂದರು. ಮಥುರಾದಲ್ಲಿಯೂ ಕರಸೇವೆ ಮಾಡಲಾಗುವುದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಥುರಾದಲ್ಲಿ ಕರ ಸೇವೆ ಮಾಡಲು ಕೋರ್ಟ್ ಬಿಡುವುದಿಲ್ಲ ಎಂಬ ಭಾವನೆ ನನಗೆ ಇದೆ ಎಂದು ಉತ್ತರಿಸಿದರು.
ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಸತೀಶ್ ಪ್ರಧಾನ್ ಸೇರಿ 32 ಆರೋಪಿಗಳನ್ನು ನಿರ್ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದರು.