ಶಿವಮೊಗ್ಗದಿಂದ ದೆಹಲಿಯ ಸಭೆಗೆ ಹೋದವರು ಇಷ್ಟು ಜನ!
ಶಿವಮೊಗ್ಗ, ಏಪ್ರಿಲ್ 03: ದೆಹಲಿಯ ನಿಜಾಮುದ್ದೀನ್ ತಬ್ಲಿಗ್ ಪ್ರಾರ್ಥನಾ ಮಂದಿರದಿಂದ ಜಿಲ್ಲೆಗೆ ಬಂದವರ ಸಂಖ್ಯೆ 24 ಇದ್ದು, ಇದರಲ್ಲಿ ಮೂವರು ಹೊರ ಜಿಲ್ಲೆಯವರಿದ್ದಾರೆ. ಇದರಲ್ಲಿ 10 ಜನರನ್ನು ತಪಾಸಣೆ ಮಾಡಲಾಗಿದ್ದು, ಯಾರಿಗೂ ಕೊರೊನಾ ಭೀತಿ ಇಲ್ಲವೆಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಳಿದ 11 ಜನರಲ್ಲಿ 14 ದಿನ 28 ದಿನಗಳ ಹೋಂ ಕ್ವಾರಂಟೈನ್ ನ್ನು ಮುಗಿಸಿದವರು ಇದ್ದಾರೆ. ಆದರೂ ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ, ಕೋಳಿ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನಿಂದ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ದರದ ಮಾರಾಟದ ದೂರುಗಳು ಬಂದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗ ಮತ್ತು ಜಿಲ್ಲೆಯಾದ್ಯಂತ ಕೆಎಂಎಫ್ ನಿಂದ ಸ್ಲಂ ನಿವಾಸಿಗಳಿಗೆ ಹಾಲು ವಿತರಣೆ ಮಾಡಲಾಗುವುದು. ಶಿವಮೊಗ್ಗ ನಗರದಲ್ಲಿ 56 ಸ್ಲಂ ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿಗೆ ವಾಲಂಟೀಯರ್ಸ್ ಮೂಲಕ ಹಾಲು ವಿತರಿಸಲಾಗುವುದು ಎಂದು ಹೇಳಿದರು.
ಸ್ವಯಂ ಸೇವಕರು ದಿನೇ ದಿನೇ ಇಂತಹ ಕಾರ್ಯಗಳಿಗೆ ಮುಂದೆ ಬರುತ್ತಿದ್ದಾರೆ, ಅವರ ಸಹಕಾರದೊಂದಿಗೆ ನಗರದ 56 ಸ್ಲಂ ಪ್ರದೇಶದಲ್ಲಿ ಒಂದು ಕುಟುಂಬಕ್ಕೆ ಒಂದು ಲೀಟರ್ ಹಾಲು ವಿತರಿಸಲಾಗುವುದು ಎಂದರು.
ಕೇವಲ ಶೇ.5 ರಷ್ಟು ಜನ ಬೀದಿಗೆ ಬಂದು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಶೇ.95 ರಷ್ಟು ಜನ ಸರ್ಕಾರದ ನಿಯಮ ಪಾಲಿಸಿ ಲಾಕ್ ಡೌನ್ ನ್ನು ಯಶಸ್ವಿಗೊಳಿಸಿದ್ದಾರೆ. ಕೇವಲ 5 ರಷ್ಟು ಜನರ ಈ ದುರ್ನಡತೆಗೆ ಬ್ರೇಕ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.