ತುಂಬಿದ ಗಾಜನೂರು ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ, ಜೂನ್ 23: ರಾಜ್ಯದ ಅತೀ ಚಿಕ್ಕ ಜಲಾಶಯ ಹಾಗೂ ಮುಂಗಾರು ಆರಂಭವಾಗುತ್ತಿದ್ದಂತೆ ಮೊದಲು ತುಂಬಿಕೊಳ್ಳುವ ಗಾಜನೂರು ತುಂಗಾ ಜಲಾಶಯಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ದಂಪತಿ ಬುಧವಾರ ಬಾಗಿನ ಸಮರ್ಪಣೆ ಮಾಡಿದರು.
ಬುಧವಾರ ಮುಂಜಾನೆ ತೀರ್ಥಹಳ್ಳಿ ರಸ್ತೆಯ ಗಾಜನೂರು ಜಲಾಶಯಕ್ಕೆ ಆಗಮಿಸಿದ ಸಚಿವ ಈಶ್ವರಪ್ಪ ದಂಪತಿಗಳು ಪುರೋಹಿತರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು. ನಂತರ ಶಾಸ್ತ್ರೋಕ್ತವಾಗಿ ಬಾಗಿನ ಸಮರ್ಪಣೆ ಮಾಡಿದರು.
ಮಲೆನಾಡಿನಲ್ಲಿ ಮಳೆಯಬ್ಬರ: ಗಾಜನೂರು ಜಲಾಶಯದಿಂದ ತುಂಗಾ ನದಿಗೆ ನೀರು ಬಿಡುಗಡೆ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, "ರಾಜ್ಯದಲ್ಲಿ ನಿರೀಕ್ಷೆ ಮೀರಿ ಮಳೆ ಬರುತ್ತಿರುವುದು ಜನರಿಗೆ ಹರ್ಷ ತಂದಿದೆ. ಈ ಸಂದರ್ಭದಲ್ಲಿ ನಾಟಿ ಮಾಡುವವರು, ಹೊಲ ಅಣಿಗೊಳಿಸುವವರೆಲ್ಲರಿಗೂ ಸಂತಸ ಮೂಡಿಸಿದೆ. ಕೊರೊನಾ ಸಂದರ್ಭದಲ್ಲಿ ಆತಂಕಕ್ಕೀಡಾಗಿದ್ದ ರೈತರು ಸಂಕಷ್ಟದಿಂದ ಹೊರಬರುತ್ತಿದ್ದಂತೆ ವರ್ಷಧಾರೆ ಖುಷಿ ತಂದಿದೆ. ತುಂಗಾ ಅಣೆಕಟ್ಟು ಈ ವರ್ಷ ಈಗಾಗಲೇ ಎರಡು ಬಾರಿ ತುಂಬಿದೆ. ಇದೇ ವೇಳೆ ಕೊರೊನಾ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೊರೊನಾದಂತೆ ಅತಿವೃಷ್ಟಿಯಾದಾಗಲೂ ಸಹ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ,'' ಎಂದರು.
"ಈ ಸಂಕಷ್ಟಗಳಿಂದ ಹೊರಬಂದು ಕೊರೊನಾ ಸೋಂಕು ಓಡಿಸುವ ನಿಟ್ಟಿನಲ್ಲಿಯೂ ಗಮನಾರ್ಹ ಸಾಧನೆ ಮಾಡಿ ದೇಶದಲ್ಲೇ ನಮ್ಮ ಸರ್ಕಾರ ಮೆಚ್ಚುಗೆ ಪಡೆದಿದೆ. ಇದೇ ಸಂದರ್ಭದಲ್ಲಿ ಕೊರೊನಾ ಲಸಿಕೆಯಲ್ಲಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದ್ದು, ನಮ್ಮ ರಾಜ್ಯದ ಕೊಡುಗೆಯೂ ಕೂಡ ಅನನ್ಯವಾಗಿದೆ. ಕೊರೊನಾ ತೊಲಗಲಿ ಹಾಗೂ ಜನ ಸಮೃದ್ಧಿಯಿಂದ ಇರಲೆಂದು ನಾವೆಲ್ಲ ಇಲ್ಲಿ ಪೂಜೆ ಮಾಡಿಸಲು ಬಂದಿದ್ದೇವೆ,'' ಎಂದು ಈಶ್ವರಪ್ಪ ಹೇಳಿದರು.
ತುಂಗಾ ನದಿಯಲ್ಲಿ ಒಳಹರಿವು ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದು, ಗೇಟ್ಗಳನ್ನು ಬಂದ್ ಮಾಡಲಾಗಿದೆ. ವಿದ್ಯುತ್ ಘಟಕಗಳಿಂದ ನೀರು ಹರಿ ಬಿಡಲಾಗುತ್ತಿದೆ. ಸದ್ಯ ಜಲಾಶಯದಿಂದ 6759 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಗನ್ನಿ ಶಂಕರ್ ಸೇರಿದಂತೆ ಹಲವರು ಇದ್ದರು.