ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೆ ಅನುಮತಿ ಇಲ್ಲದಿದ್ದರೂ, ಸಿಎಂ ತವರು ಜಿಲ್ಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ!
ಶಿವಮೊಗ್ಗ, ಆಗಸ್ಟ್ 02: ಕೊರೊನಾ ಸೋಂಕಿಗೆ ಆಯುರ್ವೇದ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದೆ, ಇದರ ಬೆನ್ನಲೇ ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್ ಈಶ್ವರಪ್ಪನವರು ತಮ್ಮ ಕ್ಷೇತ್ರದ ಜನತೆಗೆ ಆಯುರ್ವೇದ ಔಷಧ ಕಿಟ್ ವಿತರಿಸಲು ಮುಂದಾಗಿದ್ದಾರೆ.
ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದ ಡಾ. ಗಿರಿಧರ ಕಜೆಗೆ ಬಿಎಂಸಿಆರ್ಐ ನೋಟಿಸ್ ಜಾರಿಗೊಳಿಸಿದೆ. ಸರ್ಕಾರ ಅನುಮತಿ ಕೊಟ್ಟರೆ ಔಷಧಿಯನ್ನು ಉಚಿತವಾಗಿ ಹಂಚುವುದಾಗಿ ಗಿರಿಧರ ಕಜೆ ಹೇಳಿದ್ದರು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ನೋಟಿಸ್ ನೀಡಿದೆ. ಸುಳ್ಳು ಮಾಹಿತಿ ಹರಡುವುದು ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧವಾದದ್ದು ಎಂದು ಎಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ಹೆಚ್ಚಾದ ಕೊರೊನಾ ಪ್ರಕರಣ; ಪರೀಕ್ಷೆ ಪ್ರಮಾಣವೂ ಹೆಚ್ಚಳ
ಕರ್ನಾಟಕ ರಾಜ್ಯ ಸರ್ಕಾರ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಕೊರೊನಾ ಸೋಂಕಿಗೆ ಔಷಧ ನೀಡಲು ಅನುಮತಿ ನೀಡುತ್ತಿಲ್ಲ. ಹೀಗಿರುವಾಗ ಸಿಎಂ ತವರು ಜಿಲ್ಲೆಯಲ್ಲಿ ಸರ್ಕಾರದ ಪ್ರಮುಖ ಖಾತೆಯ ಸಚಿವರು ಸ್ವತಃ ಅವರು ವೈಯಕ್ತಿಕವಾಗಿ ಜಿಲ್ಲೆಯಲ್ಲಿ 4 ಲಕ್ಷ ಕುಟುಂಬಗಳಿಗೆ ಆಯುರ್ವೇದ ಔಷಧದ ಕಿಟ್ ವಿತರಿಸಲು ಮುಂದಾಗಿದ್ದಾರೆ.
ಅಲೋಪತಿ ಔಷಧದ ಕಂಪನಿಗಳ ಲಾಬಿ ಇದೆಯಾ?
ಸರ್ಕಾರ, ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಅನುಮತಿ ನೀಡದೆ ಇರುವುದರ ಹಿಂದೆ ಅಲೋಪತಿ ಔಷಧದ ಕಂಪನಿಗಳ ಲಾಬಿ ಇದೆಯಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ, ವಿಶ್ವದಲ್ಲಿಯೇ ಮೊದಲ ಬಾರಿಗೆ ಆಯುರ್ವೇದ ಚಿಕಿತ್ಸೆಯ ಮೂಲಕ ಶಿವಮೊಗ್ಗದ ಆಯುಷ್ ಇಲಾಖೆಯ ಡಾ.ಸಿ.ಎ ಹಿರೇಮಠ ಹಾಗೂ ಅಥರ್ವ ಆಯುರ್ವೇದ ಸಂಸ್ಥೆಯ ಡಾ.ಮಲ್ಲಿಕಾರ್ಜುನ ಡಂಬಳ ಅವರ ಪ್ರಯತ್ನದಿಂದ ವಿನಯಾನಂದ ಸರಸ್ವತಿ ಸ್ವಾಮಿಜಿ ಅವರಿಗೆ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಿ 1 ವಾರದಲ್ಲೇ ಗುಣಪಡಿಸಿದರು.
ಎರಡು ಕೋಟಿಯಷ್ಟು ಔಷಧವನ್ನು ಉಚಿತವಾಗಿ ನೀಡುತ್ತೇವೆ ಎಂದರು
ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಜಗತ್ತು ಮೆಚ್ಚುವ ಕಾರ್ಯ ನಡೆದಿದ್ದರೂ ಕೂಡಾ ಸರ್ಕಾರ ಈ ಬಗ್ಗೆ ಯಾವುದೇ ಗಮನ ನೀಡಲಿಲ್ಲ. ಇನ್ನು ಬೆಂಗಳೂರಿನ ಡಾ.ಗಿರಿಧರ್ ಕಜೆ ಅವರ ವಿಶಿಷ್ಟ ಪ್ರಯತ್ನದಿಂದ ಸೋಂಕಿತರಿಗೆ ಚಿಕಿತ್ಸೆ ನೀಡಿ ಯಶಸ್ವಿಯಾದರು.
ಕೊರೊನಾ ಸೋಂಕಿನ ಬಗ್ಗೆ ಡಾ.ಗಿರಿಧರ್ ಕಜೆ ಅವರ ಸಲಹೆ ಇಲ್ಲಿದೆ
ಕೊರೊನಾ ರೋಗಿಗಳಿಗೆ ಎರಡು ಕೋಟಿಯಷ್ಟು ಔಷಧವನ್ನು ಉಚಿತವಾಗಿ ನೀಡುತ್ತೇವೆ ಎಂದು ಮುಂದಾಗಿದ್ದರೂ ಸಹ ರಾಜ್ಯ ಸರ್ಕಾರ ತಡೆ ಹಿಡಿಯಿತು.
ಈ ವಿಷಯದಲ್ಲಿ ಸ್ವತಃ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಕೂಡ ಅಸಹಾಯಕರಾಗಿದ್ದಾರೆ ಎನಿಸುತ್ತಿದೆ. ಏಕೆಂದರೆ ಸಚಿವ ಕೆ.ಎಸ್ ಈಶ್ವರಪ್ಪನವರ ಮನೆ ಕೆಲಸದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗ ಸಚಿವರು ಮತ್ತು ಮನೆ ಮಂದಿಗೆ ಸೋಂಕಿನ ಪರೀಕ್ಷೆ ನಡೆಸಲಾಯಿತು ಎಲ್ಲರಿಗೂ ನೆಗೆಟಿವ್ ರಿಪೋರ್ಟ್ ಬಂದಿತ್ತು.
ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು ಆಯುರ್ವೇದದಿಂದಲೇ
ಈ ಕುರಿತು ಸಚಿವ ಕೆ.ಎಸ್ ಈಶ್ವರಪ್ಪರವರು "ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಕೊರೊನಾ ನೆಗೆಟಿವ್ ಬರಲು ಕಾರಣ ನಾವು ಆಯುರ್ವೇದ ಔಷಧ ಪಡೆದಿದ್ದೇವೆ ಆದ್ದರಿಂದ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ" ಎಂದಿದ್ದರು.
ಶಿವಮೊಗ್ಗದ ವಿನಯಾನಂದ ಸ್ವಾಮೀಜಿ ಅವರು ಕೂಡ "ನಾವು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು ಆಯುರ್ವೇದದಿಂದಲೇ' ಎಂದಿದ್ದರು. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ ರವಿ ಅವರು ಕೂಡ "ಕೊರೊನಾದಿಂದ ನಾವು ಗುಣಮುಖರಾಲು ಆಯುರ್ವೇದ ಕಾರಣ" ಎಂದಿದ್ದರು.
ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ಸತ್ಯವೇ?
ಇದೆಲ್ಲಾ ನೋಡಿದರೆ ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸದೇ ಇರುವುದು ಏನು ಅರ್ಥವನ್ನು ಸೂಚಿಸುತ್ತಿದೆ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದು ದೇಶ, ಸಂಸ್ಕೃತಿ, ಪರಂಪರೆ, ಎಂದೆಲ್ಲಾ ಹೇಳಿಕೊಳ್ಳುವುದು ಮಾತಿಗೆ ಮಾತ್ರನಾ?
ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ಸತ್ಯವೇ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಸರ್ಕಾರ ಮೆಡಿಕಲ್ ಹಗರಣಗಳ ಲಾಬಿಗೆ ಮುಂದಾಗಿದೆಯೇ? ಅಲೋಪತಿ ಔಷಧಿ ಕಂಪನಿಗಳೊಂದಿಗೆ ಕೈಜೋಡಿಸಿದೆಯೇ? ಕೊರೊನಾ ಸೋಂಕಿನ ಹೆಸರಲ್ಲಿ ದೊಡ್ಡಮಟ್ಟದ ಹಗರಣ ತಲೆ ಎತ್ತಿದೆಯೇ? ಸಚಿವರೇ ವೈಯಕ್ತಿಕವಾಗಿ ತಮ್ಮ ಕ್ಷೇತ್ರದ ಜನತೆಗೆ ಆಯುರ್ವೇದ ಔಷಧ ಕಿಟ್ ನೀಡಲು ಮುಂದಾಗಿದ್ದು, ಸರ್ಕಾರದ ಮೇಲೆ ಏಕೆ ಒತ್ತಡ ಹೇರುತ್ತಿಲ್ಲ? ಎಂದು ಸಾರ್ವಜನಿಕ ಪ್ರಶ್ನೆಯಾಗಿದೆ.
ದೇಶವನ್ನು ಕೊರೊನಾ ಮುಕ್ತ ಮಾಡಲು ಮುಂದಾಗಬೇಕು
ಚಿಕಿತ್ಸಾ ಪದ್ಧತಿಯ ವಿಷಯದಲ್ಲಿ ತಾರತಮ್ಯ ಏಕೆ ಮಾಡುತ್ತಿದೆ? ಭಾರತೀಯ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ದತಿಗಿಂತ ಇತ್ತೀಚಿನ ಅಲೋಪತಿ ಚಿಕಿತ್ಸಾ ಪದ್ದತಿಯ ಮೇಲೆ ಇಷ್ಟು ಒಲವು ಏಕೆ? ಅತೀ ಕಡಿಮೆ ದರದಲ್ಲಿ ಆಯುರ್ವೇದದಲ್ಲಿ ಔಷಧವಿದ್ದು, ಅದರ ಬಳಕೆಗೆ ಸರ್ಕಾರ ಹಿಂದೆ ಸರಿಯುತ್ತಿರುವುದಾದರೂ ಏಕೆ ?
ಈ ಎಲ್ಲಾ ಪ್ರಶ್ನೆಗಳಿಗೆ ಜನರೇ ಉತ್ತರ ಕಂಡುಕೊಳ್ಳಬೇಕಾಗಿದೆ. ಸರ್ಕಾರ ಈಗಲಾದರೂ ಆಯುರ್ವೇದ ಔಷಧ ಬಳಸಿ ದೇಶವನ್ನು ಕೊರೊನಾ ಮುಕ್ತ ಮಾಡಲು ಮುಂದಾಗಬೇಕು, "ಸರ್ವೇ ಜನಾಃ, ಸುಖಿನೋ ಭವಂತು' ಎಂದು ಜಗತ್ತಿಗೆ ಸಾರಬೇಕಾಗಿದೆ.