ಕೊಡಚಾದ್ರಿಯ ಹಿಡ್ಲುಮನೆ ಜಲಪಾತದಲ್ಲಿ ಸಿಲುಕಿದ ಯುವಕನ ರಕ್ಷಣೆ
ಶಿವಮೊಗ್ಗ, ಅಕ್ಟೋಬರ್ 19: ಶಿವಮೊಗ್ಗ ಜಿಲ್ಲೆಯ ಪ್ರವಾಸಿ ಸ್ಥಳ ಕೊಡಚಾದ್ರಿಯ ಒಂದು ಅಂಚಿನಲ್ಲಿ ಹಿಡ್ಲುಮನೆ ಜಲಪಾತ ಇದ್ದು, ಈ ಹಿಡ್ಲುಮನೆ ಜಲಪಾತ ನಿಟ್ಟೂರಿನಿಂದ 15 ಕಿ.ಮೀ ದೂರದ ಮೂಕಾಂಬಿಕಾ ಮೀಸಲು ಅರಣ್ಯದೊಳಗಿರುವ ಜಲಪಾತವಾಗಿದೆ.
ಕೊರೊನಾ ಲಾಕ್ ಡೌನ್ ಸಡಿಲಿಕೆ ನಂತರ ಈ ಜಲಪಾತ ವೀಕ್ಷಿಸಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಕೆಲವು ಪ್ರವಾಸಿಗರು ಹುಚ್ಚಾಟಗಳನ್ನು ಮಾಡಿ ಸಂಕಷ್ಟಕ್ಕೆ ಸಿಲುಕುತ್ತಾರೆ.
ಶಿವಮೊಗ್ಗ ಮಳೆ ಪ್ರಮಾಣ ಮತ್ತು ಜಲಾಶಯಗಳ ಮಟ್ಟ...
ಈ ತರಹದ ತಂಡದ ಒಬ್ಬ ಪ್ರವಾಸಿಗನೊಬ್ಬ ಸಾಹಸ ಮಾಡಲು ಹೋಗಿ ಹಿಡ್ಲುಮನೆ ಜಲಪಾತದಲ್ಲಿ ಸಿಲುಕಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಏನಿದು ಘಟನೆ?
ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಅಮೋಘ (26 ) ಮೂಲತಃ ಹಾಸನದವನು. ಈತ ತನ್ನ ಹೊರ ರಾಜ್ಯದ ಸ್ನೇಹಿತರನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದಾನೆ.
ಶನಿವಾರದಂದು ಹಿಡ್ಲುಮನೆ ಜಲಪಾತ ಸಮೀಪದ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಅಮೋಘ, ಭಾನುವಾರ ತನ್ನ ಗೆಳೆಯರೊಂದಿಗೆ ಜಲಪಾತದತ್ತ ಚಾರಣ ಹೊರಟಿದ್ದಾನೆ.
ಜಲಪಾತ ನೋಡಿಕೊಂಡು ವಾಪಸ್ ಬರುವಾಗ ಸ್ನೇಹಿತರು ಸಾಮಾನ್ಯ ಹಾದಿಯಲ್ಲಿ ಕ್ರಮಿಸಿದರೆ ಅಮೋಘ ಮಾತ್ರ ಜಲಪಾತಕ್ಕೆ ನೇರವಾಗಿರುವ ಕಡಿದಾದ ಹಾದಿ ಇಳಿದು ಮಧ್ಯೆ ಸಿಲುಕಿಕೊಂಡಿದ್ದಾನೆ.
ಮೇಲೆಯೂ ಹೋಗದೇ ಕೆಳಗೂ ಬಾರದೇ ಅಸಹಾಯಕನಾಗಿದ್ದವನನ್ನು ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೂಕಾಂಬಿಕ ಮೀಸಲು ಅರಣ್ಯ ಸಿಬ್ಬಂದಿ ಎರಡು ಮೂರು ಗಂಟೆಗಳ ಕಾರ್ಯಾಚರಣೆ ನಂತರ ಕೆಳಗಿಳಿಸಿದ್ದಾರೆ.
ಅಲ್ಲಿಂದ ಆಯ ತಪ್ಪಿದರೆ ಪ್ರವಾಸಿಗನ ಸ್ಥಿತಿ ಊಹಿಸಲೂ ಸಾಧ್ಯವಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಿಡ್ಲುಮನೆ ಜಲಪಾತದ ವೈಭವ ನೋಡಿ ಖುಷಿ ಪಟ್ಟು ಹೋಗುವುದನ್ನು ಬಿಟ್ಟು ಚೇಷ್ಠೆ ಮಾಡುವ ಪ್ರವಾಸಿಗರೇ ಹೆಚ್ಚಾಗಿರುವುದು ಆಘಾತ ಸೃಷ್ಟಿಸಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಇನ್ಸ್ ಪೆಕ್ಟರ್ ಕೆ.ಪಿ ರಾಮಪ್ಪ, ಹಾಲಪ್ಪ, ಶಿವು, ಹೆಚ್.ಎಂ.ಮಠಪತಿ, ನಾಗರಾಜ್, ವನ್ಯಜೀವಿ ಇಲಾಖೆಯ ರೂಪೇಶ ಚವ್ಹಾಣ್, ಸ್ಥಳೀಯ ನಿವಾಸಿಗಳಾದ ಸುಬ್ಬ, ಮಂಜುನಾಥ್, ರಾಜೇಂದ್ರ ಶೆಟ್ಟಿ, ಅಶೋಕ ಕುಂಬ್ಳೆ, ಇತರರು ಪಾಲ್ಗೊಂಡಿದ್ದರು.