ನಾನು ಮತ್ತು ಕಿಮ್ಮನೆ, ರಾಜಕಾರಣದಲ್ಲಿ ಈಗ ಸುಮ್ಮನೆ: ವೈಎಸ್ವಿ ದತ್ತ
ತೀರ್ಥಹಳ್ಳಿ, ಅಕ್ಟೋಬರ್ 2: ಪುಸ್ತಕ ಓದುವ ಶಾಸಕರು ಯಾರಿಗೂ ಬೇಡವಾಗಿದ್ದಾರೆ. ರಾಜಕಾರಣದಲ್ಲಿ ನಾನು ಮತ್ತು ಕಿಮ್ಮನೆ ರತ್ನಾಕರ್ ಇಬ್ಬರೂ ಅಪ್ರಸ್ತುತರಾಗಿದ್ದೇವೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ಮಾರ್ಮಿಕವಾಗಿ ನುಡಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಾತನಾಡಿದ ಅವರು, ವಿಧಾನಸೌಧದ ಗ್ರಂಥಾಲಯದಲ್ಲಿ ಯಾವಾಗಲೂ ಸಿಗುತ್ತಿದ್ದ ಗೆಳೆಯ ಕಿಮ್ಮನೆ ರತ್ನಾಕರ್. ಆದರೆ ಜನರಿಗೆ ಈಗ ಪುಸ್ತಕಗಳನ್ನು ಓದುವ ಶಾಸಕರು ಬೇಕಿಲ್ಲ. ನಾವಿಬ್ಬರೂ ಒಟ್ಟಿಗೆ ಸೋತಿದ್ದೇವೆ. ಹಣ, ಆಣೆ ಪ್ರಮಾಣಗಳೇ ನಮ್ಮ ಸೋಲಿಗೆ ಕಾರಣ ಎಂದು ದತ್ತ ಹೇಳಿದರು.
ವೈಎಸ್ವಿ ದತ್ತ ಬಿಫಾರಂಗೆ ಕಾಯುತ್ತಿದ್ದರೆ ಅತ್ತ ದೇವೇಗೌಡ್ರು ಆಡಿದ್ದೇ ಬೇರೆ
'ಅಂದು ಗಾಂಧೀಜಿ ಅವರನ್ನು ಕೊಲ್ಲಲು ಒಬ್ಬ ಗೋಡ್ಸೆ ಹುಟ್ಟಿದ್ದ. ಈಗ ಅವರ ತತ್ವಗಳನ್ನು ಕೊಲ್ಲಲು ಖಾದಿಯೊಳಗೆ ಕೋವಿ ಸಂಘಟನಾತ್ಮಕವಾಗಿ ಹುಟ್ಟಿಕೊಂಡಿದೆ ಎಂದು ಹೇಳಿದರು.
ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಚಿಂತನ ವೇದಿಕೆಯು ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಅವರು, ತೀರ್ಥಹಳ್ಳಿಯ ತಾಲೂಕು ಕಛೇರಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಮ್ಮಿಕೊಂಡಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಮೋದಿ ವೈಭವೀಕರಣ
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಹೋಲಿಸಿ ವೈಭವೀಕರಿಸುತ್ತಿರುವುದು ದುರಂತ ಎಂದು ದತ್ತ ಬೇಸರ ವ್ಯಕ್ತ ಪಡಿಸಿದರು.
ಮಹಾನ್ ವ್ಯಕ್ತಿಗಳ ನಿಂದನೆ
ಅಂಬೇಡ್ಕರ್, ಗಾಂಧೀಜಿ ಹಾಗೂ ಲೋಹಿಯಾರ ವಿಚಾರ ಬಂದರೆ ಇಂದಿನ ಯುವಜನಾಂಗ ಮುಗಿದುಬೀಳುವ ಪರಿಸ್ಥಿತಿ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಾನ್ ವ್ಯಕ್ತಿಗಳ ವಿರುದ್ಧ ಮನಬಂದಂತೆ ನಿಂದಿಸುವ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ. ಕಷ್ಟದ ಸನ್ನಿವೇಶಕ್ಕೆ ಬಂದು ನಿಂತಿದ್ದೇವೆ ಎಂದರು.
ಕಡೂರು ಮತದಾರರಿಗೆ ವೈ.ಎಸ್.ವಿ ದತ್ತ ಬರೆದ ಭಾವುಕ ಪತ್ರ
ಸೋತಿದ್ದು ಆಣೆ ಪ್ರಮಾಣದಿಂದ
ತಮ್ಮ ವಿಧಾನಸಭಾ ಚುನಾವಣೆಯ ಸೋಲನ್ನು ಶಾಂತವೇರಿ ಗೋಪಾಲ ಗೌಡರ ಸೋಲಿಗೆ ಹೋಲಿಸಿಕೊಂಡ ವೈ.ಎಸ್.ವಿ.ದತ್ತ, 'ನಾನು ಕಡೂರು ಚುನಾವಣೆಯಲ್ಲಿ ಸೋತಾಗ ನನ್ನ ಬಳಿ ಬಂದ ಅಭಿಮಾನಿ, "ಅಣ್ಣಾ ನೀನು ಸೋಲಬಾರದಿತ್ತು. ಜನ ಹಣ ತಗೊಂಡು ಬಿಜೆಪಿಗೆ ಮತ ಹಾಕಿದ್ದಾರೆ. ಬಿಜೆಪಿಯವರು ಹಣ ಕೊಟ್ಟು ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಕ್ಕೆ ನಿನಗೆ ಸೋಲಾಗಿದೆ ಅಣ್ಣಾ" ಎಂದಿದ್ದರು' ಎಂದು ನೆನಪಿಸಿಕೊಂಡರು.
ಹಾಯಾಗಿ ಮಲಗಿದೆ
ಅಂದು ರಾತ್ರಿ ನಾನು ಹಾಯಾಗಿ ಮಲಗಿದೆ. ಯಾಕೆ ಗೊತ್ತಾ? ಶಿವಮೊಗ್ಗದ ಹೊಸನಗರ ವಿಧಾನಸಭಾ ಚುನಾವಣೆ ಕ್ಷೇತ್ರದಿಂದ 1951 ರಲ್ಲಿ ಶಾಂತವೇರಿ ಗೋಪಾಲ ಗೌಡರು ಭರ್ಜರಿಯಾಗಿ ಗೆದ್ದಿದ್ದರು. ಅದೇ 1956-57 ರಲ್ಲಿ ಸೋಲುಂಡಿದ್ದರು. ಚುನಾವಣಾ ಏಜೆಂಟರಾಗಿದ್ದ ಕುಮಟಾ, ಅವರು ಎರಡು ಕಾರಣಗಳಿಂದ ಸೋತಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಜಾತಿ, ಧರ್ಮ ಇಲ್ಲದ ಕಾರಣ ಹಾಗೂ ಎರಡನೆಯದು, ಹಣ ಮತ್ತು ಧರ್ಮಸ್ಥಳದ ಮಂಜುನಾಥನ ಮೇಲಿನ ಆಣೆಯಿಂದಾಗಿ ಶಾಂತವೇರಿ ಗೋಪಾಲಗೌಡರು ಸೋತಿದ್ದರು ಎಂದು ಅವರು ಪುಸ್ತಕ ಬರೆದಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಸೋತ ನಾನು ಸಹ ಗೋಪಾಲ ಗೌಡರ ಚುನಾವಣೆಯಲ್ಲಿ ಸೋತಿದ್ದ ತರನೇ ಸೋತಿದ್ದಕ್ಕೆ ಖುಷಿಯಾಗಿ ಅಂದು ರಾತ್ರಿ ಹಾಯಾಗಿ ಮಲಗಿದೆ ಎಂದರು.
ಉಪವಾಸ ಸತ್ಯಾಗ್ರಹ
ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಮಂಗಳವಾರ ಚಾಲನೆ ದೊರಕಿತು.
ಕೇಂದ್ರ ಸರ್ಕಾರವು ಅಭಿವೃದ್ಧಿ ಚಟುವಟಿಕೆಗಳಲ್ಲಿ ವಿಫಲವಾಗಿವೆ. ಬೆಲೆ ಏರಿಕೆ, ಹಗರಣಗಳಿಂದ ಜನರು ಹೈರಾಣಾಗಿದ್ದಾರೆ ಎಂದು ನಿರಶನನಿರತ ಕಾಂಗ್ರೆಸ್ ಸದಸ್ಯರು ಆರೋಪಿಸಿದರು.